janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣದಲ್ಲಿ PCR ರ‌್ಯಾಪಿಡ್ ಟೆಸ್ಟ್ ಸೌಕರ್ಯ ಪ್ರಾರಂಭವಾಗಲಿ- ಕೆಸಿಎಫ್

ಕೋವಿಡ್ ಪ್ಯಾಂಡಮಿಕ್ ಮತ್ತು ಲಾಕ್‌ಡೌನ್ ಪರಿಣಾಮ ಸ್ಥಗಿತಗೊಂಡಿದ್ದ ಅಂತರಾಷ್ಟ್ರೀಯ ವಿಮಾನ ಪ್ರಯಾಣಗಳು ಹಂತಹಂತವಾಗಿ ತೆರೆದುಕೊಳ್ಳುತ್ತಿದೆ.

ಷರತ್ತು ಬದ್ಧ ಪ್ರಯಾಣಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆ ಪೈಕಿ ಪ್ರಮುಖವಾದ ಷರತ್ತೆಂದರೆ ‘ದುಬೈ ಅಥವಾ ಯುಎಇ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ರ‌್ಯಾಪಿಡ್ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು’ ಎಂಬುದು. ಹಾಗಾಗಿ ಭಾರತೀಯ ಅನಿವಾಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದೇಶದ ಪ್ರತಿಶತ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ರ‌್ಯಾಪಿಡ್ ಕೋವಿಡ್ ಟೆಸ್ಟ್ ಸೌಲಭ್ಯವನ್ನು ಒದಗಿಸುತ್ತಿವೆ, ಪ್ರಯಾಣಿಕರೆಲ್ಲವೂ ನಿಟ್ಟುಸಿರು ಬಿಟ್ಟು ತಮ್ಮ ಪ್ರಯಾಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ.. ನಮ್ಮ ಕರಾವಳಿಯ ಅನಿವಾಸಿಗಳ ರೋದನೆ ಮಾತ್ರ ಇನ್ನೂ ಅರಣ್ಯ ರೋದನೆಯಾಗಿದೆ. ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬ ಮಾತಿನಂತೆ ಯುಎಇ ಸರ್ಕಾರ ಪ್ರಯಾಣಕ್ಕೆ ಅಸ್ತು ಎಂದರೂ ಮಂಗಳೂರಿನಿಂದ ವಿದೇಶ ಪ್ರಯಾಣ ಬಯಸುವ ಪ್ರಯಾಣಿಕರು ಮಾತ್ರ ನಿರಾಶರಾಗಿದ್ದಾರೆ.

ಹೌದು, ಸರಿಸುಮಾರು 70 ವರ್ಷಗಳ ಇತಿಹಾಸವಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಖಾಸಗೀಕರಣಗೊಡಿದ್ದರೂ ಇನ್ನೂ ಕೂಡ ‌’ರ‌್ಯಾಪಿಡ್ ಕೋವಿಡ್ ಟೆಸ್ಟ್’ ಸೌಲಭ್ಯವಿಲ್ಲ ಎಂದರೆ ನೀವು ನಂಬಲೇ ಬೇಕು! ಜಗತ್ತು ಮತ್ತು ತಂತ್ರಜ್ಞಾನ ಇಷ್ಟೊಂದು ಮುಂದುವರಿದರೂ ಇಲ್ಲಿ ಇನ್ನೂ ‌ರ‌್ಯಾಪಿಡ್ ಟೆಸ್ಟ್ ಆರಂಭಿಸದಿರುವುದು ವಿಪರ್ಯಾಸ.

ತೀರಾ ಇತ್ತೀಚಿಗೆ ಲೋಕಾರ್ಪಣೆಗೊಂಡ ನೆರೆಯ ಕಣ್ಣೂರು ವಿಮಾನ ನಿಲ್ದಾಣದಲ್ಲಿಯೂ ಕೂಡ ರ‌್ಯಾಪಿಡ್ ಕೋವಿಡ್ ಟೆಸ್ಟ್ ಸೌಲಭ್ಯ ಕಲ್ಪಿಸಲಾಗಿದೆ. ಇತಿಹಾಸಗಳ ಹಿನ್ನೆಲೆಯಿರುವ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತ್ರ ಯಾಕೆ ಸೌಲಭ್ಯವಿಲ್ಲ?
ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಗ್ಗೆ ತುರ್ತಾಗಿ ಗಮನವಹಿಸಬೇಕಾಗಿದೆ.
ಜಿಲ್ಲೆಯ ಪ್ರಯಾಣಿಕರು ಎಲ್ಲೆಲ್ಲಿಗೋ ತೆರಳಿ ಪರದಾಡಿ ಅಲ್ಲಿಂದ ವಿದೇಶ ಯಾತ್ರೆಗೆಯ್ಯುತ್ತಿರುವುದು ಜಿಲ್ಲಾಡಳಿತದ ಗಮನಿಸಬೇಕಾಗಿದೆ

ಮಾನ್ಯ ದ.ಕ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ದಿನದಿಂದ ಹಿಡಿದು ಇಂದಿನವರೆಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತಿದ್ದಾರೆ, ಸಾಕಷ್ಟು ಸಮಸ್ಯೆ ಗಳಿಗೆ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ, ಬಹಳಷ್ಟು ಅವ್ಯವಸ್ಥೆಗಳನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಈ ಪೈಕಿ ಅತ್ಯಗತ್ಯವಾಗಿ ನಮ್ಮ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರ‌್ಯಾಪಿಡ್ ಟೆಸ್ಟ್ ಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಹಾಗಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣವೇ ವಿದೇಶಿ ಪ್ರವಾಸಿಗಳ, ಪ್ರಯಾಣಿಕರ ಮನವಿಗೆ ತಕ್ಷಣ ಸ್ಪಂದಿಸಬೇಕಾಗಿದೆ.
ಆದಷ್ಟು ಬೇಗ ರ‌್ಯಾಪಿಡ್ ಟೆಸ್ಟ್ ಸೌಲಭ್ಯವನ್ನು ಒದಗಿಸುವ ಬಗ್ಗೆ ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕಾಗಿದೆ. ದ.ಕ ಜಿಲ್ಲಾಡಳಿತಕ್ಕೆ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿರುವ ಈ ಸಮಸ್ಯೆ ತಕ್ಷಣ ನಿವಾರಣೆಯಾಗಬೇಕು. ಕಾರ್ಯ ದಕ್ಷತೆಗೆ ಹೆಸರುವಾಸಿಯಾಗಿರುವ ಮಾನ್ಯ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ರವರು ಜಿಲ್ಲೆಯ ಅನಿವಾಸಿ ಭಾರತೀಯರ ಈ ಸಮಸ್ಯೆಗೆ ಆದಷ್ಟು ಬೇಗ ತಿಲಾಂಜಲಿ ಹಾಕುವರು ಎಂದು ಭಾವಿಸುತ್ತೇವೆ.

ಇತೀ,
~ ಅಬ್ದುಲ್ ಜಲೀಲ್ ನಿಝಾಮಿ, ಕೊಡಗು.
(ಅಧ್ಯಕ್ಷರು, ಕರ್ನಾಟಕ ಕಲ್ಚರಲ್ ಫೌಂಡೇಶನ್ – ಯುಎಇ)