janadhvani

Kannada Online News Paper

ಅನಿವಾಸಿ ಕನ್ನಡಿಗರನ್ನು ಸಕಲ ಸೌಲಭ್ಯಗಳೊಂದಿಗೆ ಸ್ವಾಗತಿಸಿದ ಜಿಲ್ಲಾಡಳಿತದ ನಡೆ ಪ್ರಶಂಸನೀಯ

ಮಂಗಳೂರು: ಇಂದು ದುಬೈನಿಂದ ಬಂದ 2 ನೇ ವಿಮಾನದ ಎಲ್ಲಾ ಪ್ರಯಾಣಿಕರನ್ನು ಅತ್ಯುತ್ತಮ ಸೌಕರ್ಯಗಳೊಂದಿಗೆ ಬರಮಾಡಿಕೊಂಡ ದ.ಕ ಜಿಲ್ಲಾಡಳಿತ ಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿನಂದಿಸಿದೆ.

ಈ ಬಗ್ಗೆ ದ.ಕ.ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾನದ ಅಧಿಕಾರಿಗಳ ಸೇವೆಯನ್ನು ಶ್ಲಾಫಿಸಿರುವ ರಾಜ್ಯ ಮುಸ್ಲಿಂ ಜಮಾಅತ್ ಸೆಕ್ರಟರಿಯೇಟ್, ಅನಿವಾಸಿ ಕನ್ನಡಿಗರು ತಾಯ್ನಾಡಿಗೆ ವಾಪಸ್ಸಾಗುತ್ತಿರುವ ಈ ಸಂದರ್ಭದಲ್ಲಿ ಅದರಲ್ಲೂ ತಮ್ಮ ಹತ್ತಿರದ ಕುಟುಂಬಿಕರನ್ನೂ ಕಾಣಲು ಸಾಧ್ಯವಾಗದೆ‌ ಕ್ವಾರಂಟೈನ್ ಗೆ ಒಳಪಡುವ ಸ್ಥಿತಿಯಲ್ಲಿ ಈ ರೀತಿಯ ಉತ್ಕೃಷ್ಠ ಸೇವೆ ಮತ್ತು ಸ್ವಾಗತ ಜಿಲ್ಲಾಡಳಿತದಿಂದ ಸಿಗುತ್ತಿರುವುದು ಅನಿವಾಸಿಗಳಲ್ಲಿ ಹರ್ಷ ತಂದಿದೆ ಎಂದು ಸಂಘಟನೆಯ ರಾಜ್ಯ ಪ್ರ.ಕಾರ್ಯದರ್ಶಿ ಶಾಫಿ ಸಅದಿ, ಕಾರ್ಯದರ್ಶಿಗಳಾದ ಹಮೀದ್ ಬಜ್ಪೆ, ಅಶ್ರಫ್ ಕಿನಾರ ತಿಳಿಸಿದ್ದಾರೆ.

ದುಬೈನಿಂದ ಇಂದು ಮರಳಿದ ಹಲವಾರು ಪ್ರಯಾಣಿಕರನ್ನು ಸಂಘಟನೆಯ ಪ್ರತಿನಿಧಿಗಳು ಸಂಪರ್ಕಿಸಿದ್ದು ಅವರೆಲ್ಲರೂ ಜಿಲ್ಲಾಡಳಿತದ ಸೇವೆಯಿಂದ ಸಂತುಷ್ಠರಾಗಿರುವ ಬಗ್ಗೆ ತಿಳಿಸಿದ್ದಾರೆ. ಪಾವತಿ ಕ್ವಾರಂಟೈನಲ್ಲಿರಲು ಸಾಧ್ಯವಾಗದವರಿಗೆ ಯುನಿವರ್ಸಿಟಿ ಕಾಲೇಜಿನ ವಸತಿ ನಿಲಯದಲ್ಲಿ ಉಚಿತ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನೂ ಸಂಘಟನೆ ಪ್ರಶಂಸಿಸಿದೆ.

ವಿದೇಶದಿಂದ ಬರುವ ಎಲ್ಲಾ ಅನಿವಾಸಿ ಕನ್ನಡಿಗರಿಗೆ ಈ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಮಸ್ಲಿಂ ಜಮಾಅತ್ ಮನವಿ ಮಾಡಿದೆ.