ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೊ ಸಂವಾದದ ಬಳಿಕ ಡಿಸಿ, ಸಿಇಒ ಹಾಗೂ ಎಸ್ಪಿಗಳೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಂಜೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ರಾಜ್ಯದಲ್ಲಿ ಮೇ 3ರವರೆಗೆ ಯಥಾಸ್ಥಿತಿ ಮುಂದುವರಿಸುವುದು ಉತ್ತಮ. ಅದಾದ ಬಳಿಕ ಆರ್ಥಿಕ ಚಟುವಟಿಕೆಗೆ ಅನುಕೂಲ ಕಲ್ಪಿಸಲು ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಅಭಿಪ್ರಾಯ ನೀಡಿದ್ದಾರೆ. ಇದರೊಂದಿಗೆ ಲಾಕ್ಡೌನ್ ಮತ್ತೊಮ್ಮೆ ವಿಸ್ತರಣೆಯಾಗುವುದಿಲ್ಲ ಎನ್ನುವುದು ಬಹುತೇಕ ಖಚಿತವಾದಂತಾಗಿದೆ.
ಈಗಾಗಲೇ ರಾಜ್ಯದಲ್ಲಿ ಮೂರು ಝೋನ್ಗಳ ವಿಭಾಗವನ್ನು ಮಾಡಲಾಗಿದ್ದು, ರೆಡ್ ಝೋನ್ನಲ್ಲಿ ಕೇವಲ 6 ಜಿಲ್ಲೆಗಳಿವೆ. ಇವುಗಳ ಮೇಲೆ ತೀವ್ರ ನಿಗಾ ಇರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಗ್ರೀನ್ ಮತ್ತು ಯೆಲ್ಲೋ ಝೋನ್ಗಳಲ್ಲಿ ಲಾಕ್ಡೌನ್ ಮೇ 3ರ ನಂತರ ವಿಸ್ತರಣೆಯಾಗದಿರುವುದು ಬಹುತೇಕ ಖಚಿತಗೊಂಡಿದೆ. ಅಂತಿಮವಾಗಿ ಮೇ 3ರಂದೇ ಲಾಕ್ಡೌನ್ ಮುಂದುವರಿಸುವ ಅಥವಾ ಮುಕ್ತಗೊಳಿಸುವ ಬಗ್ಗೆ ನಿರ್ಣಯ ಹೊರಬೀಳಲಿದೆ.
ಮೇ 3ರ ವೇಳೆಗೆ ಈ ವಿಚಾರದಲ್ಲಿ ಮತ್ತೊಮ್ಮೆ ಜಿಲ್ಲಾಡಳಿತಗಳ ವರದಿ ಸ್ವೀಕರಿಸಿದ ಬಳಿಕ ಸರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಅದಾದ ಬಳಿಕ ಲಾಕ್ಡೌನ್ ವಿಸ್ತರಣೆ/ ಸಡಿಲಿಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ರೆಡ್:ಎಂದಿನಂತೆ ವಾಹನ ಸಂಚಾರವೂ ಸೇರಿದಂತೆ ಎಲ್ಲಾ ರೀತಿಯ ನಿರ್ಬಂಧಗಳು ಮುಂದುವರಿಯಲಿವೆ. ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ.
(6 ಜಿಲ್ಲೆಗಳು)ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ.
ಗ್ರೀನ್: ಅಂಗಡಿ ಮುಂಗಟ್ಟುಗಳು, ಕೈಗಾರಿಕೆಗಳು ಆರಂಭವಾಗಲಿವೆ.
(14 ಜಿಲ್ಲೆಗಳು)ಯಾದಗಿರಿ, ರಾಯಚೂರು, ಉಡುಪಿ, ಕೊಪ್ಪಳ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಚಾಮರಾಜನಾಗರ, ಕೋಲಾರ
ಯೆಲ್ಲೋ:ನಗರ ಪ್ರದೇಶಗಳ ಒಳಗಡೆ ಕಟ್ಟಡ ನಿರ್ಮಾಣ ಚಟುವಟಿಕೆಗಳು ಇರುವುದಿಲ್ಲ, ಅಂಗಡಿಗಳು ತೆರೆಯಲಿವೆ.
(10 ಜಿಲ್ಲೆ): ಬೀದರ್, ಗದಗ, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ
ರೆಡ್ ಝೋನ್ ಸೀಲ್ ಮಾಡಿ
ರೆಡ್ ಝೋನ್ನಲ್ಲಿರುವ ಹಾಟ್ ಸ್ಪಾಟ್ಗಳಲ್ಲಿ ತೀವ್ರ ನಿಗಾ ವಹಿಸಬೇಕು. ಅಗತ್ಯ ಕಂಡರೆ ಸಂಪೂರ್ಣ ಸೀಲ್ಡೌನ್ ಮಾಡಿ ನಿರ್ವಹಣೆ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಗಳಿಗೆ ಸಿಎಂ ಸೂಚಿಸಿದರು. ಆರಂಭದಲ್ಲಿ ವಿಜಯಪುರದಲ್ಲಿ ಸೋಂಕು ಪತ್ತೆ ಆಗಿರಲಿಲ್ಲ. ನಂತರ ಪರಿಸ್ಥಿತಿ ಗಂಭೀರವಾಗಲು ಜಿಲ್ಲಾಡಳಿತದ ನಿರ್ಲಕ್ಷತ್ರ್ಯವೇ ಕಾರಣ. ಇದೊಂದು ಪಾಠವಾಗಬೇಕು ಎಂದು ಸಿಎಂ ಕಿವಿಮಾತು ಹೇಳಿದರು ಎನ್ನಲಾಗಿದೆ.
ಹಸಿರು ಪಟ್ಟಿಯ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಪ್ರಾರಂಭಿಸಬಹುದು. ಈ ಜಿಲ್ಲೆಗಳಿಗೆ ರೆಡ್, ಆರೆಂಜ್ ಝೋನ್ನಿಂದ ಪ್ರವೇಶ ನಿರ್ಬಂಧಿಸಬೇಕು ಎಂದು ಹಸಿರು ಪಟ್ಟಿಯ ವ್ಯಾಪ್ತಿಯ ಡಿಸಿಗಳು ಬೇಡಿಕೆ ಸಲ್ಲಿಸಿದರು ಎಂದು ತಿಳಿದು ಬಂದಿದೆ.
ಕ್ರಷನ್ಗೆ ಗ್ರೀನ್ ಸಿಗ್ನಲ್
ಕಟ್ಟಡ ನಿರ್ಮಾಣ ಕೆಲಸಗಳಿಗೆ ಚಾಲನೆ ದೊರೆತಿರುವುದರಿಂದ ಜಲ್ಲಿಕಲ್ಲು ಹಾಗೂ ಎಂಸ್ಯಾಂಡ್ ಬೇಡಿಕೆ ಪೂರೈಸಲು ಎಲ್ಲಾ ಜಿಲ್ಲೆಗಳಲ್ಲಿಯೂ ಜಲ್ಲಿಕಲ್ಲು ಕ್ರಷರ್ಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಿದೆ.
ಗಡಿ ಓಪನ್ ಬೇಡ
ಯಾವುದೇ ಕಾರಣಕ್ಕೂ ಮೇ 3ರವರೆಗೆ ರಾಜ್ಯದ ಗಡಿ ಓಪನ್ ಮಾಡಬಾರದು. ಹೊರರಾಜ್ಯದವರು ನಮ್ಮ ರಾಜ್ಯದೊಳಗೆ ಬರಲು ಅವಕಾಶ ನೀಡಬಾರದು. ಸರಕು ಸಾಗಣೆಯಂತಹ ಅಗತ್ಯ ವಸ್ತುಗಳ ಸಂಚಾರ ಸೇವೆ ಹೊರತುಪಡಿಸಿ ಬೇರೆ ವಾಹನಗಳ ಓಡಾಟಕ್ಕೆ ಮೇ 3ರ ಬಳಿಕವೂ ತಕ್ಷಣ ಅನುಮತಿ ನೀಡಬಾರದು ಎಂದು ಗಡಿ ಜಿಲ್ಲೆಗಳ ಡಿಸಿಗಳು ಮನವಿ ಮಾಡಿಕೊಂಡರು ಎನ್ನಲಾಗಿದೆ. ಈ ನಡುವೆ ರಾಜ್ಯದ ಒಳಗೂ ರೆಡ್ ಝೋನ್ ಜಿಲ್ಲೆಗಳಿಂದ ಆರೆಂಜ್, ಗ್ರೀನ್ ಝೋನ್ ಜಿಲ್ಲೆಗಳಿಗೆ ಪ್ರವೇಶ ಬೇಡವೆಂಬ ಅಭಿಪ್ರಾಯ ಬಂತು.






