janadhvani

Kannada Online News Paper

ನನ್ನ ಎದೆಗೆ ಗುಂಡಿಕ್ಕಿದರೂ ದಾಖಲೆ ನೀಡುವ ಪ್ರಶ್ನೆಯೇ ಇಲ್ಲ – ಉವೈಸಿ

ಕರ್ನೂಲ್: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಆಲ್‌ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್‌ (ಎಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಉವೈಸಿ, ಎದೆಗೆ ಗುಂಡಿಕ್ಕಿದರೂ ದಾಖಲೆ ಪತ್ರಗಳನ್ನು ನೀಡಲಾರೆ ಎಂದು ಹೇಳಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಈ ದೇಶದಲ್ಲೇ ಉಳಿಯುತ್ತೇನೆ. ಆದರೆ ದಾಖಲೆ ಪತ್ರಗಳನ್ನು ತೋರಿಸಲಾರೆ. ದಾಖಲೆ ಕೇಳಿದರೆ ನನ್ನ ಎದೆಯನ್ನು ತೋರಿಸಿ ಗುಂಡಿಕ್ಕುವಂತೆ ಹೇಳುತ್ತೇನೆ. ಯಾಕೆಂದರೆ, ನನ್ನ ಹೃದಯದಲ್ಲಿ ಭಾರತದ ಮೇಲಿನ ಪ್ರೀತಿ ಅಡಕವಾಗಿದೆ’ ಎಂದು ಉವೈಸಿ ಹೇಳಿದ್ದಾರೆ. ಮೋದಿ ಮತ್ತು ಅಮಿತ್ ಶಾ ವಿರುದ್ಧ ಧ್ವನಿಯೆತ್ತುವಂತೆ ಕರೆ ನೀಡಿದ ಉವೈಸಿ, ಅವರ ವಿರುದ್ಧ ದನಿಯೆತ್ತುವವರು ನಿಜಾರ್ಥದಲ್ಲಿ ಹೋರಾಟಗಾರರು ಎಂದು ಹೇಳಿದ್ದಾರೆ.