ಮಂಗಳೂರು: ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕುರಿತಾದ ಅವಹೇಲನಕಾರಿ ಸಂದೇಶ ವಿರುದ್ಧ ದಾಖಲಿಸಲಾದ ದೇಶದ್ರೋಹ ಕೇಸ್ ಪ್ರಕರಣ ಸುಖಾಂತ್ಯಗೊಂಡಿದೆ ಎಂದು ಹಾಜಿ ಬಿ.ಎಮ್.ಮಮ್ತಾಝ್ ಅಲಿ ಕೃಷ್ಣಾಪುರ ಸಂದೇಶದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಖಾಝಿಯವರ ಕುರಿತಾಗಿ ಸಾಮಾಜಿಕ ಜಾಲ ತಾಣವಾದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಸಂದೇಶ ಹರಿದಾಡಿದ ಸಂಬಂಧ ಅಮಾಯಕರಾದ ಮದ್ರಸಾ ಅಧ್ಯಾಪಕ ಹಸನ್ ಝುಹ್ರಿ ಮಂಗಳಪೇಟೆ ಉಸ್ತಾದರ ವಿರುದ್ಧ ಮಂಗಳೂರು ಬಂದರು ಪೋಲೀಸ್ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು, ಮಂಗಳೂರು ಖಾಝಿಯವರ ಪರವಾಗಿ (ತಮೀಮ್ ಬಂದರ್) ಕೇಸು ದಾಖಲಿಸಿದ್ದರು.
ಇದು ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಎಲ್ಲರೂ ಒಗ್ಗಟ್ಟಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ಸಿ ವಿರುದ್ಧ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ಖಾಝಿಯವರ ಈ ನಡೆಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ನಿಟ್ಟಿನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಂಡರು ಹಾಗೂ ಮಂಗಳೂರು ಬಂದರ್ ಕೇಂದ್ರ ಮಸೀದಿಯ ಮುಖಂಡರು ಮತ್ತು ಮಂಗಳೂರು ಪೊಲೀಸ್ ಆಯುಕ್ತರ ಸಮಕ್ಷಮದಲ್ಲಿ ಪ್ರಕರಣವನ್ನು ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಿ ಅಮಾಯಕ ಉಸ್ತಾದರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ.
ಜ.15: ಅಡ್ಯಾರಿನಲ್ಲಿ ಬೃಹತ್ ಪ್ರತಿಭಟನೆ- ಸುನ್ನೀ ಕೋರ್ಡಿನೇಷನ್ ಸಮಿತಿ ಯಶಸ್ವಿಗೆ ಕರೆ
ಈ ಬಗ್ಗೆ ಯಾವುದೇ ಅನಗತ್ಯ ಗೊಂದಲ ಬೇಡ ಹಾಗೂ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನಿನಲ್ಲಿ ಜನವರಿ 15ನೇ ತಾರೀಕು ಬುಧವಾರ ನಡೆಯುವ ಪ್ರತಿಭಟನಾ ಸಭೆ ಯಶಸ್ವಿ ಗೊಳಿಸುವಂತೆ ಸಭೆಯ ಆಯೋಜಕರ ನೇತ್ರತ್ವದ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಬಿ.ಎಮ್.ಮಮ್ತಾಝ್ ಅಲಿ ಕರೆ ನೀಡಿದ್ದಾರೆ.






