janadhvani

Kannada Online News Paper

ಪೌರತ್ವ ತಿದ್ದುಪಡಿ ಮಸೂದೆ: ಇತಿಹಾಸದಲ್ಲಿ ಕರಾಳ ದಿನ-ಸೋನಿಯಾ ಗಾಂಧಿ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ.

ಡಿ.11 ಬುಧವಾರ ಭಾರತ ಸಂವಿಧಾನದ ಇತಿಹಾಸದಲ್ಲಿ ಕರಾಳ ದಿನವಾಗಿ ದಾಖಲಾಗಿದೆ. ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಸಿಕ್ಕಿದ್ದು, ಭಾರತದ ಬಹುತ್ವದ ಮೇಲೆ ಸಂಕುಚಿತ ಮನಸ್ಸಿನ ಮತ್ತು ಧರ್ಮಾಂಧ ಶಕ್ತಿಗಳಿಗೆ ದೊರೆತ ವಿಜಯ ಎಂದು ವರ್ಣಿಸಿದ್ದಾರೆ.

ಮಹಾತ್ಮ ಗಾಂಧಿಯವರ 150 ನೇ ಜನ್ಮದಿನವನ್ನು ದೇಶ ಮತ್ತು ಇಡೀ ಜಗತ್ತು ಆಚರಿಸುತ್ತಿರುವಾಗ ವಿವಾದಾತ್ಮಕ ಮಸೂದೆ ಅನುಮೋದನೆಯಾಗಿದ್ದು, ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮಾನತೆ ಮತ್ತು ಧರ್ಮನಿರಪೇಕ್ಷತೆ ತತ್ವಗಳಿಗೆ ಮಾತ್ರ ಮಸೂದೆ ವಿರುದ್ಧವಾಗಿಲ್ಲ. ಸಂವಿಧಾನದಲ್ಲಿರುವ ಜಾತಿ, ಮತ, ಪ್ರಾಂತ್ಯ, ಭಾಷೆ, ಪಂಥ ಅಥವಾ ಜನಾಂಗೀಯ ಅಂಶಗಳಿಗೂ ವಿರುದ್ಧವಾಗಿದೆ. ಮಸೂದೆ ಅಂಗೀಕಾರವಾಗಿದ್ದು, ಸ್ವಾತಂತ್ರ್ಯ ಹೋರಾಟವನ್ನು ಅಣುಕಿಸುವಂತಿದ್ದು, ದೇಶದ ಆತ್ಮಕ್ಕಾದ ಗಾಯ ಎಂದು ಹೇಳಿದ್ದಾರೆ.

ತೀವ್ರ ವಿರೋಧದ ನಡುವೆ ರಾಜ್ಯ ಸಭೆಯಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ ದೊರೆತರೆ ದೇಶದಲ್ಲಿರುವ ಲಕ್ಷಾಂತರ ಮುಸ್ಲಿಮೇತರರಿಗೆ ಪೌರತ್ವ ದೊರೆಯಲಿದೆ.