janadhvani

Kannada Online News Paper

ಮೈತ್ರಿ ಸರಕಾರದ ಹಣಕಾಸು ವಿಧೇಯಕವನ್ನೇ ಮಂಡಿಸುತ್ತೇನೆ- ಸಿಎಂ

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರ ರೂಪಿಸಿರುವ ಹಣಕಾಸು ವಿಧೇಯಕವನ್ನು ಒಂದಕ್ಷರವೂ ಬದಲಾವಣೆ ಮಾಡದೇ ಸೋಮವಾರ ಮಂಡಿಸಿ, ಅಂಗೀಕರ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಭಾನುವಾರ ಘೋಷಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸ ‘ದವಳಗಿರಿ’ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ‘ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನು ಯಾವುದೇ ಬದಲಾವಣೆ ಇಲ್ಲದೇ ವಿಧಾನಸಭೆಯಲ್ಲಿ ಸೋಮವಾರ ಮಂಡಿಸುತ್ತೇವೆ. ಈ ಕುರಿತು ಈಗಾಗಲೇ ಸ್ಪೀಕರ್‌ಗೆ ತಿಳಿಸಿದ್ದೇವೆ,’ ಎಂದು ಅವರು ತಿಳಿಸಿದರು.

ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವನ್ನೇ ಅಂಗೀಕರಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆ ವೇಳೆ ಸದನದಲ್ಲಿ ಮನವಿ ಮಾಡಿದ್ದರು. ನಂತರ ವಿಶ್ವಾಸ ಮತ ಸೋತಿದ್ದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಹಣಕಾಸು ವಿಧೇಯಕ ಅಂಗೀಕಾರಗೊಳ್ಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅದರೆ, ಮೈತ್ರಿ ಸರ್ಕಾರವೇ ರೂಪಿಸಿದ್ದ ಹಣಕಾಸು ವಿಧೇಯಕವನ್ನೇ ಅಂಗೀಕರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧರಿಸಿದ್ದರು ಎನ್ನಲಾಗಿತ್ತು. ಅದರಂತೆ ಇಂದು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.