janadhvani

Kannada Online News Paper

ಬಂಧಿಸಿಟ್ಟ ಪ್ರತಿಯೊಬ್ಬ ಶಾಸಕರಿಗೆ ಬಿಜೆಪಿ 60 ರಿಂದ 70 ಕೋಟಿ ನೀಡಿದೆ-ಯು.ಟಿ. ಖಾದರ್

ಮಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ, ಸಾವಿರ ಕೋಟಿ ಹಣ ಖರ್ಚು ಮಾಡಿದೆ ಎನ್ನುವುದನ್ನು ಜನರ ಮುಂದೆ ಒಪ್ಪಿಕೊಳ್ಳಲಿ ಎಂದು ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು, ಪ್ರಜಾಪ್ರಭುತ್ವದ ತತ್ವಕ್ಕೆ ಅನುಗುಣವಾಗಿ ಆಯ್ಕೆಯಾದ ಸರ್ಕಾರವನ್ನು ಪತನ ಮಾಡಲಾಗಿದೆ. ಶಾಸಕರನ್ನು ಕೂಡಿಟ್ಟು, ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ ಎಂದರು.

‘ಪ್ರತಿಯೊಬ್ಬ ಶಾಸಕರಿಗೆ ₹60 ರಿಂದ ₹70 ಕೋಟಿ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆಯಾಗಿದೆ ಎಂದು ಹೇಳುವ ಬಿಜೆಪಿ, ಶಾಸಕರಿಗೆ ನೀಡಿರುವ ಹಣ ಯಾವುದು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

ಜನತೆಗೆ ನೀಡಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿ ಮಾಡಿ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ದೂರಿದರು.