ಲಕ್ನೋ,ಸೆ.12: ಜ್ಞಾನವಾಪಿ ಮಸೀದಿಯಲ್ಲಿ (Gyanvapi Masjid) ಪ್ರತಿದಿನ ಹಿಂದೂ ದೇವತೆಗಳ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಆರಾಧಕರು ಮಾಡಿದ ಮನವಿಯನ್ನು ಪ್ರಶ್ನಿಸಿ ಅಂಜುಮನ್ ಸಮಿತಿ ಸಲ್ಲಿಸಿದ ಮನವಿಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿ ಮತ್ತು ಇತರ ದೇವತೆಗಳ ಆರಾಧನೆಯ ಹಕ್ಕುಗಳನ್ನು ಕೋರಿ ಮಹಿಳಾ ಫಿರ್ಯಾದಿಗಳ ಪ್ರಕರಣ ವಿಚಾರಣೆಗೆ ಯೋಗ್ಯ ಎಂದು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಆದೇಶಿಸಿದ್ದಾರೆ.
ಜ್ಞಾನವಾಪಿ ಶೃಂಗಾರ ಗೌರಿ ವಿವಾದ ಪ್ರಕರಣದ ತೀರ್ಪು ನೀಡುತ್ತಿರುವ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು ಮುಸ್ಲಿಂ ಪರವಾಗಿ ಪ್ರತಿನಿಧಿಸುವ ಅಂಜುಮನ್ ಇಂತೆಝಾಮಿಯಾ ಸಮಿತಿಯು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಸೆ.22 ರಂದು ನಡೆಯಲಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಕೋಮು ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರು ಕಳೆದ ತಿಂಗಳು ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು.
ತೀರ್ಪಿನ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಾರಣಾಸಿ ಪೊಲೀಸ್ ಕಮಿಶನರೇಟ್ ವಲಯದಲ್ಲಿ ನಿಷೇಧಾಜ್ಞೆ ಹೇರಿರುವುದಾಗಿ ಬನಾರಸ್ ಪೋಲೀಸು ಕಮಿಶನರ್ ಎ. ಸತೀಶ್ ಗಣೇಶ್ ತಿಳಿಸಿದ್ದಾರೆ.ಧಾರ್ಮಿಕ ನಾಯಕರು ಪರಸ್ಪರ ಸಂವಾದ ಸಂವಹನದ ಮೂಲಕ ಉದ್ವಿಗ್ನತೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದೂ ಪೊಲೀಸ್ ಕಮಿಶನರ್ ಮನವಿ ಮಾಡಿದ್ದಾರೆ.
ನಗರವನ್ನು ಹಂತಗಳಾಗಿ ವಿಭಾಗ ಮಾಡಿ ಆಯಾ ವಿಭಾಗಗಳನ್ನು ನೋಡಿಕೊಳ್ಳಲು ಪೋಲೀಸು ತುಕಡಿಗಳನ್ನು ನಿಶ್ಚಿತಗೊಳಿಸಿ ಬಿಡಲಾಗಿದೆ. ನಗರ ಮತ್ತು ಜಿಲ್ಲೆಯ ಗಡಿ ಪ್ರದೇಶ, ನಗರದ ಹೋಟೆಲು ಮತ್ತು ಅತಿಥಿ ಗೃಹಗಳ ಮೇಲೆ ಕಣ್ಣಿಡಲು ಸಹ ಪೋಲೀಸರನ್ನು ನಿಯೋಜಿಸಲಾಗಿದೆ ಎಂದು ಕಮಿಶನರ್ ಹೇಳಿದರು.
ಕಳೆದ ತಿಂಗಳು ಕೋರ್ಟು ಮುಸ್ಲಿಂ ಮತ್ತು ಹಿಂದೂ ಎರಡೂ ಕಡೆಯ ವಾದಗಳನ್ನು ಆಲಿಸಿ ಅದನ್ನು ದಾಖಲಿಸಿಕೊಂಡಿತ್ತು. ಇಂದು ತೀರ್ಪು ಪ್ರಕಟಿಸಲಾಗಿದೆ.