janadhvani

Kannada Online News Paper

ನ್ಯೂಯಾರ್ಕ್: ಲೇಖಕ ಸಲ್ಮಾನ್ ರಶ್ದಿಗೆ ಚೂರಿ ಇರಿತ- ಆರೋಪಿಯ ಬಂಧನ

1980ರ ದಶಕದಲ್ಲಿ ಅವರ ಬರಹಗಳ ಕಾರಣದಿಂದಾಗಿ ಇರಾನ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು

ಶತಾಕ್ವ (ನ್ಯೂಯಾರ್ಕ್) : ಭಾರತೀಯ ಮೂಲದ ಕಾದಂಬರಿಗಾರ ಸಲ್ಮಾನ್‌ ರಶ್ದಿ ಅವರ ಮೇಲೆ ಶುಕ್ರವಾರ ಹಲ್ಲೆ ನಡೆದಿದೆ. ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದಿದ್ದ ಅವರು ವೇದಿಕೆ ಮೇಲಿದ್ದಾಗ ಹಲ್ಲೆ ನಡೆದಿದೆ.

ಶತಾಕ್ವ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್‌ ರಶ್ದಿ ಅವರನ್ನು ಪರಿಚಯಿಸುತ್ತಿದ್ದ ವೇಳೆ, ವೇದಿಕೆಯ ಮೇಲೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮುಖಕ್ಕೆ ಗುದ್ದಿದ್ದಾನೆ. ದಾಳಿಯಲ್ಲಿ ರಶ್ದಿ ಅವರು ನೆಲಕ್ಕುರುಳಿದರು.ರಶ್ದಿ ಅವರ ಕುತ್ತಿಗೆಗೆ ಇರಿಯಲಾಗಿದೆ ಹಾಗೂ ಅವರ ತಲೆಗೆ ಪೆಟ್ಟಾಗಿರುವುದಾಗಿ ವರದಿಯಾಗಿದೆ. ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಭಾಷಣದ ಕಾರ್ಯಕ್ರಮದ ನಡುವೆ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಸಲ್ಮಾನ್‌ ರಶ್ದಿ ಮತ್ತು ಸಂದರ್ಶಕರ ಮೇಲೆ ಹಲ್ಲೆ ಮಾಡಿದ. ಬೆಳಿಗ್ಗೆ 11ಕ್ಕೆ (ಸ್ಥಳೀಯ ಕಾಲಮಾನ) ಶತಾಕ್ವ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ರಶ್ದಿ ಅವರ ಕುತ್ತಿಗೆಗೆ ಇರಿತದಿಂದ ಗಾಯವಾಗಿದೆ. ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ರಶ್ದಿ ಅವರು ಬದುಕಿದ್ದಾರೆ. ಅವರನ್ನು ಏರ್‌ಲಿಫ್ಟ್‌ ಮಾಡಿ, ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರ್ಯಕ್ರಮದ ಸಮನ್ವಯಕಾರರ ಮೇಲೂ ಹಲ್ಲೆಯಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನ್ಯೂಯಾರ್ಕ್‌ನ ಗವರ್ನರ್‌ ಕ್ಯಾತಿ ಹೌಚಲ್‌ ತಿಳಿಸಿದ್ದಾರೆ.
ಇಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಶತಾಕ್ವ ಇನ್‌ಸ್ಟಿಟ್ಯೂಟ್‌ನ ವಕ್ತಾರರು ಹೇಳಿದ್ದಾರೆ.

1980ರ ದಶಕದಲ್ಲಿ ಅವರ ಬರಹಗಳ ಕಾರಣದಿಂದಾಗಿ ಇರಾನ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು ಹಾಗೂ ಹಲವು ವಿವಾದಗಳು ಅವರನ್ನು ಸುತ್ತುವರಿದಿವೆ.

ಪುಸ್ತಕಗಳು ಮತ್ತು ವಿವಾದಗಳು: ಹತ್ತು ವರ್ಷ ಭೂಗತ

1988ರಲ್ಲಿ ಹೊರತಂದ ಪುಸ್ತಕ ‘The Satanic Verses’ ಪುಸ್ತಕವು ಊಹಿಗೂ ಮೀರಿದಷ್ಟು ಚರ್ಚೆಗೆ ಕಾರಣವಾಯಿತು. ಓದುಗರನ್ನು ಸೆಳೆಯುವ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಗಳೂ ಸೃಷ್ಟಿಯಾದರು. ಆ ಪುಸ್ತಕದಲ್ಲಿನ ಅಂಶಗಳು ಧಾರ್ಮಿಕ ವ್ಯಕ್ತಿಗಳ ಕಣ್ಣು ಕೆಂಪೇರಿಸಿತು. ಇರಾನ್‌ನ ಕ್ರಾಂತಿಕಾರಿ ಅಯಾತೊಲ್ಲಾ ರುಹೊಲ್ಲಾ ಖೊಮೀನಿ, ರಶ್ದಿ ಹತ್ಯೆಗೆ ಕರೆಕೊಟ್ಟಿದ್ದರು.
ಆ ಕಾದಂಬರಿಯಲ್ಲಿ ಪ್ರವಾದಿ ಮೊಹಮ್ಮದ್‌ರಿಗೆ ಅಗೌರವ ತರುವಂತೆ ಚಿತ್ರಿಸಲಾಗಿದೆ ಎಂದು ಕೆಲವು ಮುಸ್ಲೀಮರು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ರಶ್ದಿ ಅವರು ನಾಸ್ತಿಕ (ದೇವರಲ್ಲಿ ನಂಬಿಕೆ ಇರದವರು). ಅವರ ತಲೆ ಉರುಳಿಸಲು ಕರೆ ಕೊಟ್ಟಿದ್ದರಿಂದ, ಪ್ರಾಣ ಉಳಿಸಿಕೊಳ್ಳಲು ಭೂಗತರಾಗಬೇಕಾಯಿತು. ಈಗಲೂ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಬ್ರಿಟನ್‌ನಲ್ಲಿ ಅವರಿಗೆ ಪೊಲೀಸ್‌ ಭದ್ರತೆ ನೀಡಲಾಯಿತು. ರಶ್ದಿ ಅವರ ಪುಸ್ತಕ ಮುದ್ರಕರು ಹಾಗೂ ತರ್ಜುಮೆದಾರರ ಪ್ರಾಣಕ್ಕೂ ಅಪಾಯ ಎದುರಾಗುವ ಸ್ಥಿತಿ ಇತ್ತು.

ಸುಮಾರು ಹತ್ತು ವರ್ಷಗಳು ಅವರು ಭೂಗತರಾಗಿ ಜೀವನ ಸಾಗಿಸಿದ್ದರು. ಆಗಾಗ್ಗೆ ಇರುವ ಸ್ಥಳ, ಮನೆಯನ್ನು ಬದಲಿಸುತ್ತಿದ್ದರು. ಅವರ ಮನೆಯವರಿಗೂ ತಾನು ಎಲ್ಲಿದ್ದೇನೆ ಎಂದು ಹೇಳಲು ಆಗದ ಯಾತನೆ ಅನುಭವಿಸಿದ್ದರು.
ರಶ್ದಿ ಭಾಗಿಯಾಗುವ ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ ಹಾಗೂ ಸಮ್ಮೇಳನವನ್ನು ಬಹಿಷ್ಕರಿಸಲಾಗಿದೆ. ಬೆದರಿಕೆಯನ್ನೂ ಒಡ್ಡಲಾಗಿದೆ. 2007ರಲ್ಲಿ ಅವರ ವಿರುದ್ಧ ಇರಾನ್ ಮತ್ತು ಪಾಕಿಸ್ತಾನದಲ್ಲಿ ತೀವ್ರ ಪ್ರತಿರೋಧ ಎದುರಾಗಿತ್ತು.

error: Content is protected !! Not allowed copy content from janadhvani.com