janadhvani

Kannada Online News Paper

ಧ್ವಜಪ್ರೇಮದ ಹಿಂದೆ ಹುಬ್ಬಳ್ಳಿ ಈದ್ಗಾ ರೀತಿಯ ಉದ್ವಿಗ್ನತೆಯನ್ನು ಅಲ್ಲಗಳೆಯುವಂತಿಲ್ಲ- ಕೆ.ಅಶ್ರಫ್

ಬಿ. ಜೆ. ಪಿ ಯ ಪ್ರಸ್ತುತ ಧ್ವಜ ಪ್ರೇಮದ ಹಿಂದೆ, ಈ ದೇಶದ ಹುಟ್ಟು ದೇಶ ಪ್ರೇಮಿಗಳಾದ ಮುಸ್ಲಿಮ್ ಸಮುದಾಯವನ್ನು ಸಾಂಕೇತಿಕವಾಗಿ ದ್ರುವೀಕರಿಸುವ ಘಾಡ ವಾಸನೆ ಅಡಗಿದೆ ಎಂದರೆ ತಪ್ಪಾಗಲಾರದು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂಧರ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಘೋಷ ವಾಕ್ಯದೊಂದಿಗೆ ನಿರಂತರ ಒಂದು ವಾರ ಪ್ರತಿ ಮನೆಯಲ್ಲಿ ತ್ರಿವರ್ಣ ದ್ವಜ ಹಾರಾಟ ಮಾಡಲು ಕೋರಿದ್ದಾರೆ.

ಕಳೆದ 75 ವರ್ಷಗಳಿಂದ ಭಾರತದ ಅಧಿಕೃತ ತ್ರಿವರ್ಣ ಧ್ವಜವನ್ನು ತಪ್ಪಿಯೂ ಕೂಡಾ ತನ್ನ ಶಾಖೆಯಲ್ಲಿ ಆರೋಹಣಗೈಯದ ಸಂಘಟನೆಯ ತತ್ವಾದರ್ಶಗಳನ್ನು ತನ್ನ ಉಸಿರಾಗಿಸಿ ಕೊಂಡು ಬಂದ ಮತ್ತು ತ್ರಿವರ್ಣ ರಾಷ್ಟ್ರ ಧ್ವಜದ ಬದಲಿಗೆ ಭಗವಾಧ್ವಜಕ್ಕೆ ನಿನ್ನೆ ಮೊನ್ನೆಯವರೆಗೂ ನಿಷ್ಠೆ ಸಮರ್ಪಿಸಿದ, ನರೇಂದ್ರ ಮೋದಿ ಮತ್ತು ಸಂಘ ಪರಿವಾರ, ಸ್ವಾತಂತ್ರ್ಯೋತ್ಸವದ 75 ನೆ ವರ್ಷದ ಆಚರಣೆಯನ್ನು ವಿಶಿಷ್ಟ, ಅಮೃತ ಮಹೋತ್ಸವ ಆಚರಣೆ ಅದರಲ್ಲೂ ಧ್ಜಜಸಂಹಿತೆಗೆ ತಿದ್ದುಪಡಿಗೊಳಿಸಿ, ದೇಶದ ಅಸ್ಮಿತೆಯ ಗೌರವ, ಘನತೆಗೆ ಸಂಭಾವ್ಯ ಕೊರತೆ ಸೃಷ್ಟಿಯಾಗುವ ರೀತಿಯಲ್ಲಿ ಮುಂಬರುವ ಸ್ವಾತಂತ್ರ್ಯ ಆಚರಣೆಯನ್ನು ಮಾಡುವ ತವಕದಲ್ಲಿದ್ದಾರೆ.

ಧ್ವಜವನ್ನು ಸಗಟು ನೆಲೆಯಲ್ಲಿ ವಿಲೇವಾರಿಗೊಳಿಸಿ ಸೂರ್ಯಾಸ್ತಮಾನದ ನಂತರ ಕೂಡಾ ದೇಶದ ಧ್ವಜವನ್ನು ಇರುಳಲ್ಲೂ ಆರೋಹಣ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಪ್ರದರ್ಶಿಸುವಂತಿದೆ. ಈಗಾಗಲೇ ಇತರ ಧ್ವಜಗಳನ್ನು, ಬೇಕಾ ಬಿಟ್ಟಿಯಾಗಿ ಬಳಕೆ ಮಾಡಿ ದೇಶಾದ್ಯಂತ ಶಾಂತಿ ಸುವ್ಯವಸ್ಥೆ ಭಂಗಗೊಳಿಸಿದ ಈ ಪರಿವಾರದ ಹಸ್ತದಲ್ಲಿ ತ್ರಿವರ್ಣ ಧ್ವಜ ಇರುಳಲ್ಲಿ ಹಸ್ತಾಂತರವಾದರೆ ಸಂಭವಿಸುವ ಅನಾಹುತಗಳನ್ನು ವಿವರಿಸಲು ಅಸಾದ್ಯ.

ಭಾರತದಂತಹ ಮತೀಯ ಸೂಕ್ಷ್ಮತೆ ಅಸ್ತಿತ್ವದಲ್ಲಿ ಇರುವ ದೇಶದಲ್ಲಿ ಈ ಹಿಂದೆ ಸಂಭವಿಸಿದ ಸರ್ವ ಗಲಭೆ, ದೊಂಭಿ, ಹತ್ಯೆ , ಹಾನಿಗಳು ದ್ವಜಗಳಿಂದಲೇ ಸೃಷ್ಟಿಯಾದ ಕೃತ್ಯಗಳಾಗಿವೆ. ಅದರಲ್ಲೂ ಕೂಡಾ .ವಿಶಿಷ್ಟವಾಗಿ ದಕ್ಷಿಣ ಭಾರತದಲ್ಲಿ ಮತ್ತು ಪ್ರತ್ಯೇಕವಾಗಿ ಕರ್ನಾಟಕದಲ್ಲಿ ಸಂಘ ಪರಿವಾರ ಪ್ರೇರಿತ ಭಾರತೀಯ ಜನತಾ ಪಕ್ಷವು ತನ್ನ ಪ್ರಮುಖ ಬೆಳವಣಿಗೆಯನ್ನು ತನ್ನ ಸಾಂದರ್ಭಿಕ ಕುಟಿಲತೆ ಯನ್ನು ಬಳಸಿ, ಭಾರತದ ರಾಷ್ಟ್ರ ಧ್ವಜ ತ್ರಿವರ್ಣ ದ್ವಜವನ್ನು ತೊಂಬತ್ತರ ದಶಕದಲ್ಲಿ ಬಳಸಿ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ರಾಜಕೀಯವಾಗಿ ಉಪಯೋಗಿಸಿಕೊಂಡು, ಕರ್ನಾಟಕದಾದ್ಯಂತ ಜನರಲ್ಲಿ ಮತೀಯ ವಿದ್ವೇಶ ಸೃಷ್ಠಿಸಿ ಮುಸ್ಲಿಮ್ ಮತ್ತು ಮುಸ್ಲಿಮೇತರ ಮತಗಳನ್ನು ದ್ರುವೀಕರಿಸಿ ಧ್ವಜ ರಾಜಕೀಯದ ಮೂಲಕ, ಕರ್ನಾಟಕದ ಸಾಂಸ್ಕೃತಿಕ ಸಾಮರಸ್ಯದ ನಾಡನ್ನು ಕೋಮುವಾದಿ ರಾಜಕೀಯ ರಾಜ್ಯವನ್ನಾಗಿ ಮಾಡಿತು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಅಜೆಂಡಾದ ಪ್ರತಿಫಲವಾಗಿ ಭಾ.ಜ.ಪ ಕೆ ಮೂರು ಸಂಸತ್ ಸ್ಥಾನಗಳ ಗಳಿಕೆಗೆ ಕಾರಣವಾಯಿತು.

ಬಿ. ಜೆ. ಪಿ ಯ ಪ್ರಸ್ತುತ ಧ್ವಜ ಪ್ರೇಮದ ಹಿಂದೆ, ಈ ದೇಶದ ಹುಟ್ಟು ದೇಶ ಪ್ರೇಮಿಗಳಾದ ಮುಸ್ಲಿಮ್ ಸಮುದಾಯವನ್ನು ಸಾಂಕೇತಿಕವಾಗಿ ದ್ರುವೀಕರಿಸುವ ಘಾಡ ವಾಸನೆ ಅಡಗಿದೆ ಎಂದರೆ ತಪ್ಪಾಗಲಾರದು. ಈ ದೇಶದ ಮುಸ್ಲಿಮರು ತಮ್ಮ ದೇಶ ಪ್ರೇಮ ಎಂತಹುದು ಎಂದು ಸ್ವಾತಂತ್ರ್ಯ ಹೋರಾಟ, ಎನ್.ಆರ್. ಸಿ ವಿರೋಧಿ ಚಳುವಳಿ, ಪೌರತ್ವ ಸಂರಕ್ಷಣಾ ಸಭೆಗಳಲ್ಲಿ ಇಡೀ ದೇಶಾದ್ಯಂತ ಮತ್ತು ಜಾಗತಿಕವಾಗಿ ಪ್ರದರ್ಶಿಸಿ ತೋರಿಸಿದ್ದಾರೆ. ಈ ಚಳುವಳಿಯಲ್ಲಿ ಅದೆಷ್ಟೋ ಮುಸ್ಲಿಮರು ತಮ್ಮ ಜೀವ ಬಲಿ ನೀಡಿದ್ದಾರೆ. ಸಾವಿರಾರು ಮುಸ್ಲಿಮರು ಇಂದು ತಮ್ಮ ಪೌರತ್ವ ಹೋರಾಟಕ್ಕಾಗಿ ಜೈಲುಗಳಲ್ಲಿ ಅಕ್ರಮ ಬಂಧನಕ್ಕೆ ಒಳಗಾಗಿದ್ದಾರೆ.
ಹೀಗಿರುವಲ್ಲಿ ಮೋದಿ ಪರಿವಾರದ ಹರ್ ಘರ್ ತಿರಂಗಾ ಯೋಜನೆಯ ಹಿಂದೆ ವಿಧ್ವಂಸಕತೆಯ ಘಾಡ ಪಿತೂರಿ ಇದ್ದಂತಿದೆ ಎಂಬುದನ್ನು ಸರ್ವರೂ ಅರಿಯಬೇಕಿದೆ.

✍️ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com