janadhvani

Kannada Online News Paper

ಚಂದ್ರ ದರ್ಶನವಾಗಿಲ್ಲ- ರಾಜ್ಯದಲ್ಲಿ ಮಂಗಳವಾರ ಈದ್ ಉಲ್ ಫಿತರ್ ಹಬ್ಬಾಚರಣೆ

ಮಂಗಳೂರು,ಮೇ.1|ಇಂದು ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ (ಮೇ.2) ರಮಳಾನ್ 30 ಆಗಿದ್ದು, ಮಂಗಳವಾರ ಮೇ. 3 ರಂದು ಶವ್ವಾಲ್ ಒಂದು ಅಥವಾ ಈದುಲ್ ಫಿತರ್ ಆಚರಿಸಲಾಗುವುದು ಎಂದು ಉಳ್ಳಾಲ ಸಹಿತ ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

ನಾಳೆ ರಂಳಾನ್ 30 ಪೂರ್ತೀಕರಿಸಿ ಮೇ.3 ರಂದು ಈದುಲ್ ಫಿತರ್ ಆಚರಿಸುವಂತೆ ಮಂಗಳೂರು ಹಾಗೂ ದ.ಕ.ಜಿಲ್ಲಾ ಸಂಯುಕ್ತ ಖಾಝಿಗಳಾದ ಗೌರವಾನ್ವಿತ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿಗಳಾದ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪವಿತ್ರ ರಮಳಾನ್ ಮುಸಲ್ಮಾನರ ಮಟ್ಟಿಗೆ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕಠಿಣ ವೃತವನ್ನು ಆಚರಿಸಿ, ಅಲ್ಲಾಹನ ಇಷ್ಟ ದಾಸರ ಸಾಲಿನಲ್ಲಿ ಸೇರುವ ಉದ್ದೇಶದಿಂದ ಎಲ್ಲಾ ವಿಧ ಕೆಡುಕುಗಳಿಂದಲೂ ದೂರ ಸರಿದು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಶ್ರಮಿಸುತ್ತಾರೆ.

ರಮಳಾನ್ ತಿಂಗಳ ಕಡ್ಡಾಯ ವೃತವನ್ನು ಕೊನೆಗೊಳಿಸುವ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ರಮಳಾನ್ 29 ನೇ ಉಪವಾಸ ತೊರೆದ ಬಳಿಕ ಶವ್ವಾಲ್ ಚಂದ್ರ ದರ್ಶನವಾದಲ್ಲಿ ಮರುದಿನ ಈದ್ ಆಚರಿಸಲಾಗುತ್ತದೆ. ಚಂದ್ರ ದರ್ಶನವಾಗದಿದ್ದಲ್ಲಿ ರಮಳಾನ್ 30 ಪೂರ್ತೀಕರಿಸಿದ ನಂತರ ಈದ್ ಆಚರಿಸಲಾಗುತ್ತದೆ.

ಈದ್ ದಿನದಂದು ಯಾವೊಬ್ಬನೂ ಹಸಿವಿನಿಂದ ಇರಕೂಡದು ಎಂಬ ಉದ್ದೇಶದಿಂದ,ಆ ದಿನದಲ್ಲಿ ಫಿತರ್ ಝಕಾತ್ ಸಂಪ್ರದಾಯವನ್ನು ಕಡ್ಡಾಯಗೊಳಿಸಲಾಗಿದೆ. ಊರಿನಲ್ಲಿ ಸಾಮಾನ್ಯವಾಗಿ ಸೇವಿಸಲ್ಪಡುವ ಅಕ್ಕಿ, ಗೋಧಿ, ರಾಗಿ ಎಂಬಿತ್ಯಾದಿ ಧಾನ್ಯಗಳನ್ನು ನಿರ್ದಿಷ್ಟ ಅಳತೆಯಲ್ಲಿ ಝಕಾತ್ ರೂಪದಲ್ಲಿ ನೀಡಬೇಕು.

ಈದ್ ಎಂಬುದು ಪರಸ್ಪರ ಸ್ನೇಹ, ಸಹಬಾಳ್ವೆ ಸೌಹಾರ್ಧತೆಯನ್ನು ಸಾರುವ ಸಂಕೇತವಾಗಿದೆ.

error: Content is protected !! Not allowed copy content from janadhvani.com