ದೆಹಲಿಯ ಗುರುಗ್ರಾಮದಲ್ಲಿ ಮುಸ್ಲಿಮರ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್, “ಒಬ್ಬ ಹಿಂದೂವಾಗಿ ನನಗೆ ನಾಚಿಕೆಯಾಗುತ್ತಿದೆ!” ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿಯ ಗುರುಗ್ರಾಮದ ಸೆಕ್ಟರ್ 12 ಮತ್ತು ಸೆಕ್ಟರ್ 47 ರಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಮಾಡುತ್ತಿದ್ದ ಮುಸ್ಲಿಮರ ಮೇಲೆ ಕೆಲವು ಹಿಂದೂ ಸಂಘಟನೆಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದಾಳಿ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಪ್ರಾರ್ಥನೆ ಸಲ್ಲಿಸುತ್ತಿರುವ ಜನರ ಮುಂದೆ ಬಜರಂಗದಳದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಕ್ಲಿಪ್ ಹಂಚಿಕೊಂಡಿದ್ದಾರೆ.
As a Hindu I’m ashamed! https://t.co/26OfIqTeHO
— Swara Bhasker (@ReallySwara) October 22, 2021
ಸ್ವರಾ ಭಾಸ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ, “ಅನ್ಯ ಧರ್ಮದ ಜನರಿಗೆ ಕಿರುಕುಳ ನೀಡುತ್ತಿರುವ ಕೆಲವು ಪುಂಡ ಪೋಕರಿಗಳು ನನ್ನ ದೇವರ ಹೆಸರನ್ನು ಬಳಸುತ್ತಿದ್ದಾರೆ. ಇದು ನನ್ನ ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ. ಅಂತಹ ಜನರ ಬಗ್ಗೆ ನನಗೆ ನಾಚಿಕೆಯಾಗುತ್ತದೆ. ನಾನು ಹಿಂದೂವಾಗಿ ನಾಚಿಕೆಪಡುತ್ತೇನೆ. ಹಿಂದೂ ಧರ್ಮವು ಇತರ ಧರ್ಮದ ಜನರಿಗೆ ಕಿರುಕುಳ ನೀಡುವುದನ್ನು ಕಲಿಸುವುದಿಲ್ಲ” ಎಂದಿದ್ದಾರೆ.
ಇದೇ ಘಟನೆಯನ್ನು ಖಂಡಿಸಿರುವ ಮತ್ತೊಬ್ಬ ಟ್ವಿಟರ್ ಬಳಕೆದಾರರು “ಧಾರ್ಮಿಕ ಅಸಹಿಷ್ಣುತೆ ಎಲ್ಲಾ ಸಮಯಕ್ಕಿಂತ ಈಗ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಇತರ ಧರ್ಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಾವು ಜಾತ್ಯತೀತರು ಎಂದು ಸಾಬೀತುಪಡಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
ನಗರದ ಸೆಕ್ಟರ್ 47ರಲ್ಲಿ ಸರ್ಕಾರಿ ಭೂಮಿಯಲ್ಲಿ ಬಹಿರಂಗ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬಂದಿರುವಾಗಲೇ ಈ ಘಟನೆ ಮುನ್ನೆಲೆಗೆ ಬಂದಿದೆ. ಮುಸ್ಲಿಂ ಸಮುದಾಯದ ಜನರು ಪ್ರಾರ್ಥನೆಗಾಗಿ ಸೇರುತ್ತಿದ್ದರು. ಈ ವೇಳೆ ಬಜರಂಗದಳದ ಕಾರ್ಯಕರ್ತರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ದಾಳಿ ನಡೆಸಿದ್ದಾರೆ.