janadhvani

Kannada Online News Paper

ಭಾರತದಲ್ಲಿ ಕೋವಿಡ್ ಹೆಚ್ಚಳ: ಯುಎಇ ಗೂ ಪ್ರವೇಶ ನಿಷೇಧ

ದುಬೈ: ಭಾರತದಿಂದ ಯುಎಇಗೆ ಪ್ರಯಾಣ ನಿರ್ಬಂಧಿಸಲಾಗಿದ್ದು,ಶನಿವಾರದಿಂದ ಹತ್ತು ದಿನಗಳವರೆಗೆ ನಿಷೇಧವಿರಲಿದೆ. 14 ದಿನಗಳ ಕಾಲ ಭಾರತದಲ್ಲಿ ಉಳಿದುಕೊಂಡಿರುವ ಅಥವಾ ಟ್ರಾನ್ಸಿಟ್ ವೀಸಾದಲ್ಲಿ ಭಾರತದ ಮೂಲಕ ಪ್ರಯಾಣಿಸಿದವರಿಗೂ ಈ ನಿಷೇಧ ಅನ್ವಯಿಸುತ್ತದೆ.

ಭಾರತದಲ್ಲಿ ಅನಿಯಂತ್ರಿತವಾಗಿ ಕೋವಿಡ್ ಹರಡುತ್ತಿದೆ ಮತ್ತು ತಳೀಯವಾಗಿ ಮಾರ್ಪಾಡುಗೊಂಡಿರುವ ವೈರಸ್ ಇರುವಿಕೆಯ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಯಾವುದೇ ಅಧಿಕೃತ ಘೋಷಣೆ ಪ್ರಕಟಗೊಡಿಲ್ಲವಾದರೂ, ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

10 ದಿನಗಳ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ನಿಷೇಧವನ್ನು ವಿಸ್ತರಿಸುವ ಅಥವಾ ರದ್ದುಗೊಳಿಸುವ ಸಾಧ್ಯತೆಯಿದೆ. ಹೊಸ ನಿರ್ಧಾರವು ತುರ್ತು ಅಗತ್ಯಗಳಿಗಾಗಿ ಮನೆಗೆ ಮರಳಿದ ವಲಸಿಗರಿಗೆ ತೊಂದರೆಯಾಗಲಿದೆ.

ಯುಎಇಯಲ್ಲಿ ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆದಿದ್ದು, ರೋಗದ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಿದೆ. ಈ ಹಂತದಲ್ಲಿ, ವೈರಸ್ ಮತ್ತೆ ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಯಾಣ ನಿಷೇಧವನ್ನು ಏರ್ಪಡಿಸಲಾಗಿದೆ.

ಈ ಹಿಂದೆ ಒಮಾನ್ ಭಾರತದಿಂದ ಪ್ರಯಾಣವನ್ನು ನಿಷೇಧಿಸಿತ್ತು. ಸೌದಿ ಅರೇಬಿಯಾ ಮತ್ತು ಕುವೈತ್‌ ನಿಷೇಧವನ್ಧು ಮುಂದುವರಿಸಿದೆ.

ಭಾರತ ಸೇರಿದಂತೆ 20 ದೇಶಗಳಿಂದ ಪ್ರಯಾಣವನ್ನು ಮೇ 17 ರಿಂದ ಸೌದಿ ಅರೇಬಿಯಾ ನಿಷೇಧವನ್ನು ಮುಂದುವರಿಸಿದೆ.

ಭಾರತದ ಮೋದಿ ಸರ್ಕಾರವು ಕೊರೋನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವ ಪರಿಣಾಮ ಕಳೆದ ಎರಡು ವರ್ಷಗಳಿಂದ ವಿದೇಶದಲ್ಲೂ ಸ್ವದೇಶದಲ್ಲೂ ಇರುವ ಅನಿವಾಸಿ ಭಾರತೀಯರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕತಾರ್ ಮತ್ತು ಬಹ್ರೇನ್ ಈಗ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ನಿರ್ಣಾಯಕ.

error: Content is protected !! Not allowed copy content from janadhvani.com