ಧಾರ್ಮಿಕ ಶಿಕ್ಷಣ ಕಲಿತ ಹೆಣ್ಣಿನಿಂದ ಮಾತ್ರ ಮನೆ ಮತ್ತು ಮನವನ್ನು ಬೆಳಗಲು ಸಾಧ್ಯ, ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ & ನೈತಿಕ ಶಿಕ್ಷಣವನ್ನು ಕೂಡಾ ಅಳವಡಿಸಿ ಕೊಳ್ಳಬೇಕೆಂದು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ಕರೆ ನೀಡಿದರು.
ಅವರು ಕುಂಬ್ರ ಮರ್ಕಝ್ ಇಪ್ಪತ್ತನೆಯ ವಾರ್ಷಿಕದ ಅಂಗವಾಗಿ ನಡೆದ ಹಳೆ ವಿದ್ಯಾರ್ಥಿನಿಯರ ಸಮಾವೇಶದಲ್ಲಿ (ಅಲುಂನಿ ಅಸೆಂಬ್ಲಿ) ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನೈತಿಕ ಪ್ರಜ್ಞೆ ಮತ್ತು ಧಾರ್ಮಿಕತೆ ಎಲ್ಲಾ ಕ್ಷೇತ್ರಗಳಿಂದಲೂ ಮರೆಯಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ವಿಶೇಷವಾಗಿ ಹೆಣ್ಮಕ್ಕಳನ್ನು ನೈತಿಕತೆಯ ಹಾದಿಯಲ್ಲಿ ಮುನ್ನಡೆಸಲು ಮರ್ಕಝ್ನಂತಹ ಸಂಸ್ಥೆಗಳು ಕಾಲಘಟ್ಟದ ಬೇಡಿಕೆಯೆಂದು ಅವರು ಅಭಿಪ್ರಾಯ ಪಟ್ಟರು
ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಯು.ಕೆ.ಮುಹಮ್ಮದ್ ಸಅದಿ ವಳವೂರು ಉಧ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅಲುಂನಿ ಸಂದೇಶ ನೀಡಿದರು. ಪ್ರಖ್ಯಾತ ತರಬೇತುದಾರ ಶಹೀರ್ ಅಹ್ಮದ್ ಫಾಝಿಲ್ ಪ್ರೇರಣಾ ಭಾಷಣ ಮಾಡಿದರು.
ಪದವಿ ಕಾಲೇಜ್ ಪ್ರಾಂಶುಪಾಲ ಮನ್ಸೂರ್ ಕಡಬ, ಪಿಯು ಕಾಲೇಜ್ ಪ್ರಾಂಶುಪಾಲೆ ಸಂಧ್ಯಾ ಪಿ.ಶೆಟ್ಟಿ, ಶುಭ ಹಾರೈಸಿದರು. ಕಾರ್ಯಾಧ್ಯಕ್ಷ ಹಾಜಿ ಪಿ.ಎಂ.ಅಬ್ದುಲ್ ರಹ್ಮಾನ್ ಅರಿಯಡ್ಕ ಸ್ವಾಗತಿಸಿ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಜಿ ಕರೀಂ ಚೆನ್ನಾರ್ ಧನ್ಯವಾದ ಸಲ್ಲಿಸಿದರು.