ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಕರ್ನಾಟಕ ವಖ್ಫ್ ಬೋರ್ಡ್ ಸದಸ್ಯರೂ ಆದ ಮೌಲಾನಾ ಶಾಫೀ ಸಅದಿ ಅವರು ವಖ್ಫ್ ಹಣವನ್ನು ದುರುಪಯೋಗ ಮಾಡಿದರು ಎಂಬ ಹೆಸರಿನಲ್ಲಿ ವ್ಯಕ್ತಿಯೊರ್ವರು ಅವರ ಮೇಲೆ ಕೀಳು ಮಟ್ಟದ ಆರೋಪ ಹೊರಿಸಿ ವೈಯುಕ್ತಿಕ ತೇಜೋವಧೆ ಮಾಡಲು ಶ್ರಮಿಸಿದ್ದನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಖಂಡಿಸಿದೆ.
ವಖ್ಫ್ ಮಂಡಳಿ ಸಮುದಾಯದ ಆಸ್ತಿ, ಸಮುದಾಯದ ಅಭ್ಯುದಯಕ್ಕಾಗಿ ಪೂರ್ವಿಕರಾದ ಸಜ್ಜನರು ತಮ್ಮ ಅಮೂಲ್ಯವಾದ ಭೂಮಿಗಳನ್ನು ವಖ್ಫ್ ಮಾಡಿದ್ದು ಅದರ ಸಂರಕ್ಷಣೆಯ ಜವಾಬ್ದಾರಿಯನ್ನು ವಖ್ಫ್ ಮಂಡಳಿ ಹೊಂದಿದೆ. ಸದ್ರಿ ಮಂಡಳಿಯಲ್ಲಿ ಇಸ್ಲಾಮೀ ಶರೀಅತ್ ಕಾನೂನು ತಿಳಿದ ವಿದ್ವಾಂಸ (ಮೌಲಾನಾ) ರೊಬ್ಬರು ಸದಸ್ಯರಾಗಿ ನೇಮಕಗೊಂಡದ್ದನ್ನು ಸಮುದಾಯ ತುಂಬ ನಿರೀಕ್ಷೆಯೊಂದಿಗೆ ಸ್ವಾಗತಿಸಿದೆ. ಮಂಡಳಿಯ ಸೌಲಭ್ಯಗಳನ್ನು ಸಮುದಾಯದ ಹತ್ತಿರ ಕೊಂಡೊಯ್ಯಲು ಶಾಫೀ ಸಅದಿಯವರು ಶಕ್ತಿ ಮೀರಿ ದುಡಿದಿದ್ದಾರೆ. ಇದೀಗ ಅವರ ಕಾರ್ಯ ವೈಖರಿಯನ್ನು ಗುರುತಿಸಿ ಮಂಡಳಿ ಅವರನ್ನು ಚೇರ್ಮೇನ್ ಆಗಿ ಆಯ್ಕೆ ಮಾಡುವ ಸಾಧ್ಯತೆಯನ್ನು ಮನಗಂಡು ಅದನ್ನು ತಪ್ಪಿಸಲು ಕೆಲವು ವ್ಯಕ್ತಿಗಳು ಮಾಡುವ ಹತಾಶ ಪ್ರಯತ್ನ ಇದೆಂದು, ಇದರಿಂದಾಗಿ ಸಅದಿ ಅವರ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗದು ಎಂದು ಎಸ್.ವೈ.ಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.