ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಅವರ ಕಾರು ಬೆಂಕಿಗೆ ಆಹುತಿಯಾದ ಕಾರಣ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡ ಸಂಜಯ್ ಶಿಂಧೆ (55) ಮಂಗಳವಾರ ಮರಣ ಹೊಂದಿದ್ದಾರೆ. ಅವರು ಪಕ್ಷದ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿದ್ದರು. ಮಹರಾಷ್ಟ್ರದ ಮುಂಬೈ -ಆಗ್ರಾ ಹೆದ್ದಾರಿಯ ಪಿಂಪಲ್ಗಾಂವ್ ಬಸ್ವಂತ್ ಟೋಲ್ ಪ್ಲಾಝಾ ಬಳಿಯಲ್ಲಿ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಶಾರ್ಟ್ಸರ್ಕ್ಯೂಟ್ನಿಂದ ಕಾರಿನಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಪಕ್ಕದಲ್ಲೇ ಇದ್ದ ಹ್ಯಾಂಡ್ ಸ್ಯಾನಿಟೈಸರ್ಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಾರಿನ ಸೇಫ್ಟಿ ಲಾಕ್ ಆನ್ಆಗಿದ್ದು, ಕಾರ್ನ ಡೋರ್ ತೆಗೆದು ಹೊರಬರಲು ಸಂಜಯ್ ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿ ಜೀವಂತ ದಹನವಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸುವುದರ ಒಳಗೆ ಸಂಜಯ್ ಶಿಂಧೆ ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರಿನಲ್ಲಿದ್ದ ಸ್ಯಾನಿಟೈಸರ್ಗೆ ಬೆಂಕಿ ತಗುಲಿ ಭಾರತದ ರಾಜಕೀಯ ನಾಯಕರೊಬ್ಬರು ಜೀವಂತ ದಹನವಾಗಿದ್ದಾರೆ.