ಬೆಂಗಳೂರು, ಸೆ.20: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ರಾಜ್ಯಸಭಾ ಸದಸ್ಯರಾಗಿ ದೇವರ ಹೆಸರಿನಲ್ಲಿಂದು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಸಭೆಗೆ ಇತ್ತೀಚೆಗೆ ಅವಿರೋಧವಾಗಿ ಕರ್ನಾಟಕದಿಂದ ಹೆಚ್.ಡಿ.ದೇವೇಗೌಡ ಆಯ್ಕೆಯಾಗಿದ್ದರು.ರಾಜ್ಯಸಭೆ ಈ ಬಾರಿ ಭಾನುವಾರ ಕಾರ್ಯನಿರ್ವಹಿಸಿದ್ದು ಅಧಿವೇಶನ ಬೆಳಿಗ್ಗೆ 9:00 ಗಂಟೆಗೆ ಭಾಷಣ ವೇಳೆ ದೇವೇಗೌಡ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ಜುಲೈ 22 ರಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ 20 ರಾಜ್ಯಗಳಿಂದ ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿದ್ದ 61 ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಗಿತ್ತು. ಆದರೆ ಪ್ರಮಾಣವಚನಕ್ಕಾಗಿಯೇ ದೆಹಲಿಗೆ ಅದು ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿರುವ ಸಮಯದಲ್ಲಿ ವಿಮಾನಪ್ರಯಾಣ ಸೂಕ್ತವಲ್ಲ ಎಂಬ ಕಾರಣಕ್ಕೆ ದೇವೇಗೌಡರು ಪ್ರಮಾಣ ವಚನ ಸ್ವೀಕಾರ ಮುಂದೂಡಿ, ಸಂಸತ್ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದರು. ಇಂದುಭಾನುವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದರು. 1996ರ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್ ನಾಯಕರೊಬ್ಬರು ರಾಜ್ಯಸಭೆಗೆ ಪ್ರವೇಶಿಸಿದ್ದಾರೆ.