janadhvani

Kannada Online News Paper

ಸೆ.21ರಿಂದ ಶಾಲಾ,ಕಾಲೇಜು ಆರಂಭ- ಮಾರ್ಗಸೂಚಿ ಬಿಡುಗಡೆ

ನವದೆಹಲಿ,ಸೆ.09: ಶಾಲಾ-ಕಾಲೇಜು ತೆರೆಯಲು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸೆ.21ರಿಂದ ಪೋಷಕರ ಅನುಮತಿ ಮೇರೆಗೆ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಹುದೆಂಬ ಮಾರ್ಗಸೂಚಿ ಬಂದಿದ್ದು, ಈ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಬಳಿಕ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ತರಬೇತಿ ಕೇಂದ್ರಗಳು ತೆರೆಯಲು ಹಲವು ಸುರಕ್ಷತಾ
ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 21 ರಿಂದ 9-12ನೇ ತರಗತಿ ಆರಂಭಕ್ಕೆ ಕೇಂದ್ರ ಸಚಿವಾಲಯ ಅನುಮತಿ ನೀಡಿದೆ.

ಕೊರೋನಾ ಸೋಂಕು ಭಾರತದಲ್ಲಿ ಸಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಭಾರತ ಸರ್ಕಾರ ಮಾರ್ಚ್ 25 ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿತ್ತು. ಹೀಗಾಗಿ ಕಳೆದ ಆರು ತಿಂಗಳಿನಿಂದ ದೇಶದಲ್ಲಿ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಆದರೆ, ಇದೀಗ ಶಾಲಾ ಕಾಲೇಜುಗಳನ್ನು ಸರ್ಕಾರ ಹಂತ ಹಂತವಾಗಿ ತೆಗೆಯಲು ಮುಂದಾಗಿದ್ದು, ಈ ಸಂಬಂಧ ಮಂಗಳವಾರ ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸ್ಟ್ಯಾಂಡರ್ಡ್‌ ಆಪರೇಟಿಂಗ್ ಪ್ರೊಸೀಜರ್ (SOP) ಬಿಡುಗಡೆ ಮಾಡಿರುವ ಸಚಿವಾಲಯವು ಪ್ರತ್ಯೇಕ ಸಮಯಗಳಲ್ಲಿ ತರಗತಿಗಳನ್ನು ಉತ್ತಮ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಸೂಚಿಸಿದೆ.

  • ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಾಧ್ಯವಾದಷ್ಟು ಕನಿಷ್ಠ 6 ಅಡಿಗಳಷ್ಟು ಭೌತಿಕ ದೂರವನ್ನು ಪಾಲಿಸಬೇಕು.
  • ಎಲ್ಲರಿಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು.
  • ಕೈಗಳಲ್ಲಿ ಕೊಳೆ ಇಲ್ಲದಿದ್ದರೂ ಸಹ ಆಗಾಗ್ಗೆ ಸೋಪಿನಿಂದ ಕೈ ತೊಳೆಯುವುದು (ಕನಿಷ್ಠ 40-60 ಸೆಕೆಂಡುಗಳವರೆಗೆ) ಕಡ್ಡಾಯ.
  • ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ಗಳ ಬಳಕೆಯನ್ನು (ಕನಿಷ್ಠ 20 ಸೆಕೆಂಡುಗಳವರೆಗೆ) ಎಲ್ಲಿ ಸಾಧ್ಯವೋ ಅಲ್ಲಿ ಮಾಡಬೇಕು.
  • ಉಸಿರಾಟದ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಕ್ತಿ ಕೆಮ್ಮುವಾಗ ಅಥವಾ ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು ಮತ್ತು ಅದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಇದಲ್ಲದೆ ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚುವ ಕಟ್ಟುನಿಟ್ಟಿನ ಅಭ್ಯಾಸವನ್ನು ಪಾಲಿಸಬೇಕು.
  • ಎಲ್ಲರಿಂದ ಆರೋಗ್ಯದ ಸ್ವಯಂ-ಮೇಲ್ವಿಚಾರಣೆ ಮತ್ತು ಯಾವುದೇ ಅನಾರೋಗ್ಯವನ್ನು ಬೇಗನೆ ವರದಿ ಮಾಡಬೇಕು.
  • ಎಲ್ಲೆಂದರಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಆರೋಗ್ಯ ಸೇತು ಅಪ್ಲಿಕೇಶನ್ನ ಬಳಕೆಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಸಲಹೆ ನೀಡಬಹುದು.

error: Content is protected !! Not allowed copy content from janadhvani.com