ನವದೆಹಲಿ, ಜು. 27: ರಾಜಸ್ತಾನ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಜು.24ರವರೆಗೆ ತಡೆ ಹಿಡಿಯುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಅಲ್ಲಿನ ವಿಧಾನಸಭಾ ಸ್ಪೀಕರ್ ಸಿ.ಪಿ.ಜೋಷಿ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಸ್ಪೀಕರ್ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕೆಂದು ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಜಸ್ಟಿಸ್ ಬಿಆರ್ ಗವಾಯಿ ಹಾಗೂ ಜಸ್ಟಿಸ್ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿತು.
“ಸುಪ್ರೀಂಕೋರ್ಟ್ನ ಆದೇಶಗಳನ್ನು ಹೈಕೋರ್ಟ್ ಪಾಲಿಸದಿರುವುದು ದುರದೃಷ್ಟಕರ. ಇದು ನಮಗೆ ನೋವುಂಟು ಮಾಡಿದೆ. ಅರ್ಜಿಯನ್ನು ಹಿಂತೆಗೆದುಕೊಳ್ಳುವಿಕೆ ಎಂದರೆ ಸಮಸ್ಯೆಯನ್ನು ಎತ್ತಲು ನಮಗೆ ಅವಕಾಶ ನೀಡಬಾರದು ಎಂದಲ್ಲ” ಎಂದು ಸುಪ್ರೀಂಕೋರ್ಟ್ನಲ್ಲಿ ಸ್ಪೀಕರ್ ಪ್ರತಿನಿಧಿಸಿರುವ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.