ಚಿಕ್ಕಮಗಳೂರು; ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಚಿವ ಸಿ.ಟಿ.ರವಿ ಪ್ರಕೃತಿ ಚಿಕಿತ್ಸೆ ಮೂಲಕ 15 ದಿನಗಳ ಬಳಿಕ ಗುಣಮುಖರಾಗಿದ್ದಾರೆ.
ಜುಲೈ 10ರಂದು ಸಚಿವರಿಗೆ ಕೊರೋನಾ ಇರುವುದು ದೃಢವಾದ ಬಳಿಕ ಸುಮಾರು 15 ದಿನಗಳ ಕಾಲ ತಮ್ಮ ಫಾರಂ ಹೌಸ್ ನಲ್ಲಿ ಆಯುರ್ವೇ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ವಿಶೇಷ ಅಂದರೆ 15 ದಿನಗಳ ಕಾಲವೂ ಇಂಗ್ಲಿಷ್ ಮೆಡಿಸಿನ್ ಬಳಸದ ಸಚಿವರು ಕೊರೋನಾದಿಂದ ಗುಣಮುಖರಾಗಿದ್ದಾರೆ.
ಗುಣಮುಖರಾದ ಬಳಿಕ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಟಿ.ರವಿ, ಕೊರೋನಾ ಬಂದರೆ ಯಾರು ಹೆದರಬೇಡಿ. ಕೊರೋನಾ ಬಂದರೆ ಪ್ರೀತಿ ಇರಲಿ ಭೀತಿ ಬೇಡ ಎಂದು ಹೇಳಿದ್ದಾರೆ. ಸ್ನೇಹಿತ ಸ್ವದೇಶಿ ಜಗದೀಶ್, ಡಾ.ಗಿರಿಧರ್ ಕಜೆ ಅವರ ಬೌಮ್ಯ ಹಾಗೂ ಮತ್ತೊಂದು ಮಾತ್ರೆಯನ್ನ ಕಳಿಸಿದ್ದರು. ಇದು ರೋಗನಿರೋಧಕ ಶಕ್ತಿ ಹೆಚ್ವಿಸುವಂತಹದ್ದು. ಕೊರೋನಾ ಬರುವುದಕ್ಕೂ ನಾಲ್ಕು ದಿನಗಳ ಮೊದಲೇ ಈ ಮಾತ್ರೆಗಳನ್ನು ತೆಗೆದುಕೊಂಡಿದ್ದೆ.
ಕೊರೋನಾ ದೃಢವಾದ ಬಳಿಕ ಅಮೃತಬಳ್ಳಿ ಹಾಗೂ ನೆಲ್ಲಿ ಕಷಾಯ ಸೇವಿಸುತ್ತಿದ್ದೆ. ಜೊತೆಗೆ ದಿನಕ್ಕೆ ನಾಲ್ಕೈದು ಲೀಟರ್ ಬಿಸಿ ನೀರು ಕುಡಿದು ನಿಯಮಿತ ಆಹಾರ, ವಾಕ್ ಹಾಗೂ ಯೋಗ ಮಾಡುತ್ತಿದೆ ಎಂದಿದ್ದಾರೆ. ಕೊರೋನಾ ಬಂದರೆ ಯಾರು ಹೆದರಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದರು.
ಸೋಂಕಿನಿಂದ ಮೃತಪಟ್ಟ ಮೃತದೇಹಗಳಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡದಂತ ಭೀತಿ ಸೃಷ್ಟಿಸಿದ್ದೇವೆ. ಮೃತದೇಹದಿಂದ ಯಾವುದೇ ತೊಂದರೆ ಆಗುವುದಿಲ್ಲ. ಹೆಣ ಮುಟ್ಟಿದವರು ಮೂಗು, ಕಣ್ಣು, ಬಾಯಿ ಮುಟ್ಟಿಕೊಂಡರೆ ಸೋಂಕು ತಗುಲಬಹುದು. ಹೆಣವೇ ಎದ್ದು ಬಂದು ಅವರ ಕೈ-ಬಾಯಿ-ಮೂಗು ಮುಟ್ಟುವುದಿಲ್ಲ.
ಸತ್ತವರಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡಲು ಭೀತಿಯ ಅವಶ್ಯಕತೆ ಇಲ್ಲ. ಅದಕ್ಕಾಗಿ ತಂಡ ರಚನೆ ಮಾಡುತ್ತೇವೆ. ಅದರ ನೇತೃತ್ವ ನನ್ನದೇ. ನಮ್ಮ ಜಿಲ್ಲೆಯಲ್ಲಿ ತಂಡ ರಚನೆ ಮಾಡಿ, ತೊಂದರೆಯಾದರೆ ನಾವೇ ಮುಂದೆ ನಿಂತು ಅವರವರ ನಂಬಿಕೆ ಪ್ರಕಾರ ಅಂತ್ಯಸಂಸ್ಕಾರ ಮಾಡ್ತೀವಿ ಎಂದು ಹೇಳಿದರು.
ಇನ್ನು ಇದೇ ವೇಳೆ, ಸೀಲ್ ಡೌನ್, ಲಾಕ್ಡೌನ್ ಬಗ್ಗೆ ಮಾತನಾಡಿದ ಸಚಿವ ಸಿ.ಟಿರವಿ, ವೈರಸ್ ಒಂದೆರಡು ಮೀಟರ್ ಕ್ರಮಿಸಬಹುದು, ನೂರಾರು ಮೀಟರ್ ಅಲ್ಲ. ಆದ್ದರಿಂದು ನೂರು ಮೀಟರ್ ಸೀಲ್ ಡೌನ್ ಬಗ್ಗೆ ಪರಿಶೀಲನೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ.
ವೈರಸ್ ನಿರ್ಜೀವ ವಸ್ತುವಿನ ಮೇಲೆ ಏಳರಿಂದ ಎಂಟು ಗಂಟೆ ಮಾತ್ರ ಇರುತ್ತೆ. ಹಾಗಾಗಿ, ವಾರಗಟ್ಟಲೇ ಸೀಲ್ಡೌನ್ ಬಗ್ಗೆ ಪರಿಶೀಲಿಸಬೇಕಾಗಿದೆ. ಮೊದಲು 500 ಮೀಟರ್ ಸೀಲ್ಡೌನ್ ಮಾಡುತ್ತಿದ್ದರು, ಈಗ 100 ಮೀಟರ್ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.