ಮಂಗಳೂರು: ಇಲ್ಲಿನ ಅಡ್ಯಾರಿನಲ್ಲಿ ನಿರ್ಮಾಣಗೊಳ್ಳಲಿರುವ ಹಜ್ ಭವನ ಇದರ ನಿರ್ಮಾಣ ಸಮಿತಿಯಿಂದ ಮಾಜಿ ಶಾಸಕ ಮೊಯ್ದಿನ್ ಬಾವ ಅವರನ್ನು ಕೈಬಿಡಲಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮಹಮ್ಮದ್ ಮಸೂದ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ವಕ್ಫ್ ಸಮಿತಿಗೆ ಪತ್ರ ಬರೆದಿದ್ದಾರೆ.
“ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಪ್ರದೇಶದಲ್ಲಿ ಹಜ್ ಭವನ ನಿರ್ಮಾಣಕ್ಕೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು, ಒಬ್ಬ ಸದಸ್ಯನನ್ನಾಗಿ ನನ್ನನ್ನು ನೇಮಕ ಮಾಡಲಾಗಿದೆ. ದಿವಂಗತ ಖಮರುಲ್ ಇಸ್ಲಾಮ್ ಅವರು ಅಲ್ಪ ಸಂಖ್ಯಾತರ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ. ಮಂಜೂರು ಮಾಡಿದ್ದು, ನಾನು ಮತ್ತು ಶಾಸಕರಾಗಿದ್ದ ಮೊಯಿದಿನ್ ಭಾವ, ನಿರ್ಮಾಣ ಸಮಿತಿ ಅಧ್ಯಕ್ಷರಾದ ಹಾಜಿ ವೈ.ಮುಹಮ್ಮದ್ ಕುಂಞಿ, ರಶೀದ್, ಹನೀಫ್ ಹಾಜಿ ಮೊದಲಾದವರು ತೆರಳಿ 10 ಕೋಟಿ ರೂ.ಗೆ ಹೆಚ್ಚಿಸಿದ್ದೇವೆ.
ಅದೂ ಅಲ್ಲದೇ, ಆರಂಭದಿಂದಲೇ ಶಾಸಕ ಮೊಯಿದಿನ್ ಭಾವ ಅವರು ಹಜ್ ಭವನ ನಿರ್ಮಾಣಕ್ಕೆ ಮುತುವರ್ಜಿ ವಹಿಸಿ, ಭವನ ನಿರ್ಮಾಣಕ್ಕೆ ಅಡ್ಯಾರಿನಲ್ಲಿ ಸ್ಥಳವನ್ನು ಧಾನ ಮಾಡಿದ ಫಾತಿಮಾ ಕುಟುಂಬದೊಂದಿಗೆ ನಿರಂತರ ಸಂಪರ್ಕಿಸಿ ಸ್ಥಳವನ್ನು ಹಜ್ ಸಮಿತಿಗೆ ನೀಡುವ ಬಗ್ಗೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಈ ಸ್ಥಳವನ್ನು ಅಂದಿನ ವಕ್ಫ್ ಸಚಿವರಾಗಿದ್ದ ಝಮೀರ್ ಅಹ್ಮದ್ ಮತ್ತು ಸಿ.ಇ.ಒ. ಎ.ಬಿ ಇಬ್ರಾಹಿಂ ಅವರಿಗೆ ತೋರಿಸಿಕೊಟ್ಟ ಹನೀಫ್ ಹಾಜಿ ಇವರಿಬ್ಬರನ್ನೂ ನಿರ್ಲಕ್ಷಿಸಿರುವುದು ಸರಿಯಲ್ಲ”
ಮುಂದಿನ ಸಭೆಯಲ್ಲಿ ಮೊಯ್ದಿನ್ ಭಾವ ಮತ್ತು ಹನೀಫ್ ಹಾಜಿ ಅವರ ನಾಮನಿರ್ದೇಶನ ಮಾಡುವಂತೆ ದ.ಕ.ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್ ಪತ್ರ ಮೂಲಕ ಒತ್ತಾಯಿಸಿದ್ದಾರೆ.