janadhvani

Kannada Online News Paper

ಕೆಸಿಎಫ್ ಕತ್ತರ್ – ಮಂಗಳೂರು ತಲುಪಿದ ಪ್ರಥಮ ಚಾರ್ಟಡ್ ವಿಮಾನ

ದೋಹಾ : ಕೋವಿಡ್-19 ಕಾರಣದಿಂದ ವಿಮಾನಯಾನ ರದ್ದಾದ ಹಿನ್ನೆಲೆಯಲ್ಲಿ ಊರಿಗೆ ಮರಳಲಾಗದೆ ಹಲವಾರು ಅನಿವಾಸಿ ಕನ್ನಡಿಗರು ಖತ್ತರ್ ನಲ್ಲಿ ಸಂಕಷ್ಟದಲ್ಲಿದ್ದು, ಸರಕಾರದ ವತಿಯಿಂದ ದಿನೇನ ವಿಮಾನಗಳ ವ್ಯವಸ್ಥೆ ಕಲ್ಪಿಸುತ್ತಿದೆ. ಆದರೂ ಸಾಕಷ್ಟು ಮಂಗಳೂರಿಗರಿರುವ ಕತ್ತರ್ ನಿಂದ ವಂದೇ ಭಾರತ್ ಮಿಷನ್ ವತಿಯಿಂದ ಇದುವರೆಗೆ ಕೇವಲ ಒಂದು ವಿಮಾನ ಮಾತ್ರ ಬಂದಿದ್ದು, ಮಂಗಳೂರಿಗೊಂದು ವಿಮಾನದ ಬೇಡಿಕೆ ಸಾಕಷ್ಟಿದ್ದುದರಿಂದ ಆಪತ್ಕಾಲದ ಆಸರೆಯಾಗಿ, ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್, ವತಿಯಿಂದ ಪ್ರಥಮ ಚಾರ್ಟರ್ಡ್ ವಿಮಾನವು ಮಂಗಳೂರಿನಲ್ಲಿ ಬಂದಿಳಿಯಿತು. 174 ಪ್ರಯಾಣಿಕರು ಇದರ ಪ್ರಯೋಜನ ಪಡೆದಿದ್ದು, ಸಂಕಷ್ಟದಲ್ಲಿರುವ ನೂರಾರು ಕನ್ನಡಿಗರ ಪಾಲಿಗೆ ಬಹುದೊಡ್ಡ ಆಸರೆಯಾಗಿ ಮೂಡಿತು.

ಕೆಸಿಎಫ್ ವ್ಯವಸ್ಥೆಗೊಳಿಸಿದ ವಿಮಾನವು ಜುಲೈ 16 ರಂದು ಕತ್ತರ್ ಸಮಯ, ಬೆಳಿಗ್ಗೆ 9:35 ಕ್ಕೆ ದೋಹಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಸ್ಥಳೀಯ ಸಮಯ ಸಂಜೆ 4:10 ಕ್ಕೆ ಮಂಗಳೂರಿನಲ್ಲಿ ಬಂದಿಳಿಯಿತು. ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು, ಸಣ್ಣಮಕ್ಕಳು, ವೀಸಾ ಕಾಲಾವದಿ ಮುಗಿದವರು, ಉದ್ಯೋಗ ಕಳೆದು ಕೊಂಡವರು ಇತ್ಯಾದಿ, ವಿಭಿನ್ನ ರೀತಿಯ ಸಂತ್ರಸ್ತರನ್ನೊಳಗೊಂಡ ಪ್ರಯಾಣಿಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರು.

ರೋಗಿಯೊಬ್ಬರು ಕೊನೆಯ ಘಳಿಗೆಯಲ್ಲಿ ತುರ್ತಾಗಿ ಊರಿಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂದಾಗ ಡಾ ಆರತಿ ಕೃಷ್ಣ ರವರು ಮಧ್ಯೆ ಪ್ರವೇಶಿಸಿ, ಭಾರತೀಯ ರಾಯಭಾರ ಕಚೇರಿಯಿಂದ ಕ್ಲಿಯರೆನ್ಸ್ ಮಾಡಿ ಕೊಟ್ಟಿದ್ದು, ಈ ಮೂಲಕ ಯಾವುದೇ ಅಡೆಚಣೆಯಿಲ್ಲದೆ ಅವರಿಗೆ ಊರಿಗೆ ಹೋಗಲು ಸಹಕಾರವಾಯ್ತು.

ಯಾತ್ರೆಯ ನೊಂದಾವಣಿಯಿಂದ ಪ್ರಾರಂಭಿಸಿ, ಅಗತ್ಯ ದಾಖಲೆಗಳು ಮತ್ತು ಪಾಲಿಸ ಬೇಕಾದ ಆರೋಗ್ಯ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು, ಕೆಸಿಎಫ್ ಪ್ರತೀ ಪ್ರಯಾಣಿಕರಿಗೆ ನೀಡಿದ್ದು, ಮಹಾಮಾರಿ ಕೋರೋಣ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಪ್ರಯಾಣದ ಸಂದರ್ಭದಲ್ಲಿ ಧರಿಸಬೇಕಾದ ಸಂಪೂರ್ಣ ಸುರಕ್ಷಾ ಕವಚ (PPE kit) ಮತ್ತು ಲಘು ಉಪಹಾರವು ಸಂಘಟನೆಯ ವತಿಯಿಂದ ನೀಡಲಾಗಿತ್ತು. ತನ್ನ ಪ್ರಯಾಣಿಕರ ಸುರಕ್ಷೆ ಮತ್ತು ಉತ್ತಮ ಸೇವೆಯ ಉದ್ದೇಶವನ್ನಿಟ್ಟು ಕೊಂಡು ಪ್ರತೀಯೋರ್ವರೊಂದಿಗೆ ಸಂಘಟನೆಯ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಕ್ವಾರಂಟೈನ್ ಮುಗಿಸಿ ಮನೆ ಸೇರುವ ವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ. ಇಂತಹ ಹಲವಾರು ಸಮಾಜ ಮುಖಿ ಚಟುವಟಿಕೆಗಳ ಮುಖಾಂತರ ಕೆಸಿಎಫ್, ಸಾರ್ವಜನಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಪ್ರಸ್ತುತ ಚಾರ್ಟರ್ ವಿಮಾನದ ವ್ಯವಸ್ಥೆ ಮತ್ತು ಅರ್ಪಣಾ ಮನೋಭಾವ ಹೊಂದಿರುವ ಕಾರ್ಯಕರ್ತರ ಸೇವಾ ವೈಖರಿಯು ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೆಸಿಎಫ್ ಆಯೋಜಿಸಿದ ಚಾರ್ಟರ್ ವಿಮಾನದ ಯಶಸ್ವಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಕತ್ತರ್ ಭಾರತೀಯ ರಾಯಭಾರ ಕಚೇರಿಯ ಸಹಕಾರವನ್ನು ನೆನಪಿಸಿಕೊಳ್ಳುತ್ತಾ, ಅಗತ್ಯವಿರುವ ಸರ್ಕಾರೀ ಅನುಮತಿಯನ್ನು ಪಡೆಯುವಲ್ಲಿ ಸಹಕರಿಸಿದ, ಕರ್ನಾಟಕ ರಾಜ್ಯ NRI ಫೋರಮ್ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಮಂಗಳೂರು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಅಸಿಸ್ಟೆಂಟ್ ಕಮಿಷನರ್ ಡಾ ಯತೀಶ್ ಉಳ್ಳಾಲ್, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಶಾಫಿ ಸಅದಿ ಬೆಂಗಳೂರು ಹಾಗೂ ಬೆಂಗಳೂರು ನೋಡಲ್ ಅಧಿಕಾರಿ ಮೀನಾ ನಾಗರಾಜ್ ರವರಿಗೆ ಸಂಘಟನೆಯು ಕೃತಜ್ಞತೆ ಸಲ್ಲಿಸುತ್ತಿದೆ.

ಮಳೆಯನ್ನೂ ಲೆಕ್ಕಿಸದೆ, ಲಗೇಜುಗಳನ್ನು ಸ್ವತಃ ಹೆಗಲಮೇಲೇರಿಸಿ, ಹೋಟೆಲ್ ಗಳಿಗೆ ಸಾಗಿಸುವುದರಿಂದ ಹಿಡಿದು ಕ್ವಾರಂಟೈನ್ ಸಮಯದುದ್ದಕ್ಕೂ ಪ್ರಯಾಣಿಕರ ಎಲ್ಲಾ ಅಗತ್ಯತೆಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸುತ್ತಾ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ SSF ಕಾರ್ಯಕರ್ತರನ್ನು ಕೆಸಿಎಫ್ ನೇತಾರರು ಮತ್ತು ಪ್ರಯಾಣಿಕರು ಮನತುಂಬಿ ಪ್ರಶಂಸಿಸಿದರು.

ಅವಿಶ್ರಾಂತ ಕಾರ್ಯಾಚರಣೆ ಮೂಲಕ ಈ ಧ್ಯೇಯವನ್ನು ಸಾಧಿಸುವಲ್ಲಿ ದುಡಿದ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ಮತ್ತು ವಿಮಾನವು ಮಂಗಳೂರಿಗೆ ತಲುಪಿದೊಡನೆ ಪ್ರಯಾಣಿಕರ ಎಲ್ಲ ರೀತಿಯ ಸೇವೆಗಳ ಉಸ್ತುವಾರಿ ವಹಿಸಿಕೊಂಡು ಸದಾ ಕಾರ್ಯನಿರತರಾಗಿರುವ ರಾಜ್ಯ SYS ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಗಳ ಎಲ್ಲಾ ನಾಯಕರಿಗೆ ಕೆಸಿಎಫ್ ಕತ್ತರ್ ಅಭಿನಂದನೆಗಳನ್ನು ಸಲ್ಲಿಸುತ್ತಿದೆ ಎಂದು ಕೆಸಿಎಫ್ ಕತ್ತರ್, ಚಾರ್ಟರ್ ವಿಮಾನ ಸಮಿತಿಯ ಚೇರ್ಮ್ಯಾನ್, ಅಬ್ದುರ್ರಹೀಮ್ ಸಅದಿಯವರು ಮತ್ತು ಜನರಲ್ ಕನ್ವೀನರ್ ಮುನೀರ್ ಮಾಗುಂಡಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com