ಸಾಲೆತ್ತೂರು ಸಮೀಪದ ಕಾಡುಮಠ ಎಂಬಲ್ಲಿ ನಡೆದ ಅಪ್ರಾಪ್ತ ಬಾಲಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಪ್ರಮುಖ ಆರೋಪಿ ದಿನೇಶ್ ಕನ್ಯಾನ ಹಾಗೂ ಕೃತ್ಯ ನಡೆಸಿದ ನಾಲ್ವರ ಸಂಘವನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಗಳನ್ನು ಜರಗಿಸುವಂತೆ ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ ಸಂಬಂಧಪಟ್ಟವರನ್ನು ಆಗ್ರಹಿಸಿದೆ.
ಪ್ರಕರಣದ ಆರೋಪಿಯು, ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು ಅಮಾಯಕ ವಿದ್ಯಾರ್ಥಿಗಳನ್ನು ಬಳಸಿಕೊಂಡು ನಕಲಿ ಖಾತೆಗಳ ಮೂಲಕ ಒಂದು ಧರ್ಮದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿ, ದರೋಡೆ ಕೃತ್ಯ ನಡೆಸುವ ಬಗ್ಗೆ ಮಾಹಿತಿ ಇದ್ದು, ಕೃತ್ಯದಲ್ಲಿ ಜಾತಿ ನಿಂದನೆಗೈದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೋಮು ಸಾಮರಸ್ಯಕ್ಕೆ ದಕ್ಕೆಯಾಗುವ ರೀತಿಯ ವಿಡಿಯೋಗಳನ್ನು ವೈರಲ್ ಮಾಡಿ ತೆರೆಮರೆಯಲ್ಲಿ ಕುಳಿತು ವಿಘ್ನ ಸಂತೋಷ ಪಡುವ ಇಂತಹ ಕೃತ್ಯ ಖಂಡನೀಯ, ಆದ್ದರಿಂದ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ,ಸಂಭಂದಪಟ್ಟ ಅಧಿಕಾರಿಗಳು ಸತ್ಯಾಸತ್ಯತೆಯನ್ನು ಬಯಲುಗೊಳಿಸುವಂತೆ, ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.