ಹೋಟಲ್ ಕಮಿಷನ್ ದಂಧೆಗಿಳಿದ ದಕ್ಷಿಣ ಕನ್ನಡ ಜಿಲ್ಲಾಡಳಿತ!ಮಂಗಳೂರು ಏರ್ಪೋರ್ಟ್ ನಲ್ಲೇ ಉಳಿದ ಪ್ರಯಾಣಿಕರು!!
2000 ರೂಪಾಯಿ ಬಾಡಿಗೆ ನೀಡಿ ಹೋಟೆಲ್ ಕ್ವಾರೈಂಟೇನ್ ಗೆ ಬಲವಂತದ ಒತ್ತಾಯ!!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಸಭೆಗಳ ಮೇಲೆ ಸಭೆ ನಡೆಸಿದರೂ ವಿದೇಶದಿಂದ ಪ್ರಥಮ ವಿಮಾನದಲ್ಲಿ ಬಂದವರ ಪೈಕಿ 33 ಮಂದಿ ಕಷ್ಟದ ಮೇಲೆ ಕಷ್ಟ ಅನುಭವಿಸಿ ಬೆಳಗಿನ ಜಾವ ಕ್ವಾರಂಟೈನ್ ರೂಮ್ ತಲುಪಿದರು.
ಅದರಲ್ಲೂ ಗರ್ಭಿಣಿಯರು ಬಹಳ ತ್ರಾಸಪಟ್ಟಿದ್ದಾರೆ. ಭಾರಿ ಪೊಲೀಸ್ ಬಂದೋಬಸ್ತ್ ಇದ್ದರೂ ಕುಡಿಯಲು ನೀರು ಕೊಡುವ ವ್ಯವಸ್ಥೆಯೂ ಇರಲಿಲ್ಲ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟರು. ಉಪವಾಸ ಹಿಡಿದು ಬೆಳಗ್ಗೆ ಮನೆಯಿಂದ ಹೊರಟು, ಸಂಜೆ ವಿಮಾನದಲ್ಲಿ ಕುಳಿತು, ರಾತ್ರಿ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದವರನ್ನು ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿ ಅಲ್ಲಿ ಇಲ್ಲಿ ಸುತ್ತಾಡಿಸಿ, ಬೆಳಿಗ್ಗೆ 5 ಗಂಟೆಗೆ ಹೋಟೆಲ್ಗೆ ಬಿಡಲಾಯಿತು.
ಹೋಟಲ್ ಕಮಿಷನ್ ದಂಧೆಗಿಳಿದ ದಕ್ಷಿಣ ಕನ್ನಡ ಜಿಲ್ಲಾಡಳಿತ
ದುಬೈಯಿಂದ ಮಂಗಳೂರಿಗೆ ತಲುಪಿದ ವಿಮಾನ ಯಾತ್ರಿಕರನ್ನು ಏರ್ಪೋರ್ಟ್ ನಲ್ಲಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ ಘಟನೆ ವರದಿಯಾಗಿದ್ದು ಇದರಿಂದ ಜಿಲ್ಲಾಡಳಿತ ತಲೆತಗ್ಗಿಸುವಂತಾಗಿದೆ. ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಯಾತ್ರಾರ್ಥಿಗಳನ್ನು ಒತ್ತಾಯಪಡಿಸಲಾಗಿದೆ.
ಮೂವತ್ತರಷ್ಟು ಪ್ರಯಾಣಿಕರು ನಮ್ಮಲ್ಲಿ ಹೋಟೆಲ್ ಕ್ವಾರೈಂಟೇನ್ ಗೆ ಹಣವಿಲ್ಲ. ನಾವು ಕೆಲಸ ಕಳಕೊಂಡು ವೇತನವಿಲ್ಲದೆ ಅಸಾಹಾಯಕರಾಗಿ ಊರಿಗೆ ಬಂದಿದ್ದೇವೆ. ಒಂದು ದಿನಕ್ಕೆ 2000/- ರೂಪಾಯಿಯಂತೆ ಹದಿನೈದು ದಿನಗಳಿಗೆ ಮೂವತ್ತು ಸಾವಿರ ರೂಪಾಯಿ ನೀಡಲು ನಮ್ಮಿಂದ ಅಸಾಧ್ಯದ ಮಾತು. ಗಂಡ ಹೆಂಡತಿ ಇಬ್ಬರೂ ಇದ್ದರೆ ಇಬ್ಬರಿಗೂ 2000/- ದಂತೆ ಬೇರೆ ಬೇರೆ ಪಾವತಿಸಬೇಕಾಗುತ್ತದೆ. ನಮ್ಮನ್ನು ದಾರುಲ್ ಇರ್ಶಾದ್ ಅಥವಾ ಅಲ್ ಮದೀನಾ ಹಾಸ್ಟೆಲ್ ನಲ್ಲಿ ಏರ್ಪಡಿಸಿದ ಕ್ವಾರೈಂಟೇನ್ ಗೆ ತಲುಪಿಸಿ ನಾವು ಅಲ್ಲೇ ಉಳಿದುಕೊಳ್ಳುತ್ತೇವೆ ಎಂದಾಗ ಅಲ್ಲಿಗೆ ಅಂಬ್ಯುಲೆನ್ಸ್ ಸೇವೆ ಒದಲಾಗಿಸುವುದಿಲ್ಲ. ದಾದಿಗಳ ವ್ಯವಸ್ಥೆ ಇಲ್ಲ. ಸೂಪರ್ ವೈಸರ್ ನೇಮಕವಾಗಿಲ್ಲ ಎಂದು ಕಮಿಷನ್ ದಂಧೆಯ ಕರಾಳ ಗಬ್ಬು ವಾಸನೆ ಮೂಗಿಗೆ ಬಡಿಯುವಂತೆ ಅಧಿಕಾರಿಗಳು ಹೇಳಿದ್ದಾರೆ.
ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಹಾಸ್ಟೆಲ್ ಗಳಿಗೆ ಸಿಬ್ಫಂದಿಗಳನ್ನು ನೇಮಕ ಮಾಡಿ ಅಂಬ್ಯುಲೆನ್ಸ್ ಸೇವೆ ಪೋಲೀಸ್ ಸೇವೆ ಎಲ್ಲವನ್ನೂ ಒದಗಿಸಿ ಕೊಟ್ಟ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ದಾರುಲ್ ಇರ್ಶಾದ್ ಮತ್ತು ಅಲ್ ಮದೀನಾ ಹಾಸ್ಟೇಲ್ ಗಳಿಗೆ ನೇಮಕ ಮಾಡಲು ತಡೆಯಾದರೂ ಏನು? ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಕ್ವಾರೈಂಟೇನ್ ವ್ಯವಸ್ಥೆಯ ಪಟ್ಟಿಯಲ್ಲಿ ಈ ಎರಡು ಸಂಸ್ಥೆಯ ಹೆಸರು ಲಿಖಿತಗೊಂಡಿದ್ದರೂ ಸಿಬ್ಬಂದಿಗಳ ನೇಮಕಾತಿ ಮಾಡದಿರಲು ಕಾರಣವೇನು?
ಸಾವಿರಕ್ಕೂ ಮಿಕ್ಕ ಯಾತ್ರಾರ್ಥಿಗಳನ್ನು ಗರ್ಭಿಣಿ ಮಹಿಳೆಯರನ್ನು ಯಾವುದೇ ರೀತಿಯ ತೊಂದರೆಯಾಗದಂತೆ ಸ್ವೀಕರಿಸಿದ ಕೇರಳ ಸರಕಾರದ ವ್ಯವಸ್ಥೆಯನ್ನು ನೋಡಿ ಕರ್ನಾಟಕ ರಾಜ್ಯ ಸರಕಾರಕ್ಕೆ ನಾಚಿಕೆಯಾಗಬೇಡವೇ? ಏರ್ಪೋರ್ಟ್ ಟ್ಯಾಕ್ಸ್ ನೀಡಿ ಟಿಕೇಟ್ ಪಡೆದುಕೊಂಡಿದ್ದರೂ ಗರ್ಭಿಣಿ ಮಹಿಳೆಯರಿಗೆ ವಯಸ್ಕರಿಗೆ ಏರ್ಪೋರ್ಟ್ ನಲ್ಲಿ ಅವರ ಲೆಗೇಜ್ ಗಳನ್ನು ಬಸ್ ಗೆ ತಲುಪಿಸಲು ಸಿಬ್ಬಂದಿಗಳಿಲ್ಲದೆ ಪರದಾಡಬೇಕಾದ ದುರಾವಸ್ಥೆ ಕೂಡ ಎದುರಾಗಿದೆ.
ರಾತ್ರಿವರೆಗೂ ಒಂದು ತೊಟ್ಟು ನೀರಿಲ್ಲದೆ ಕಂಗಾಲಾದ ಚಿಕ್ಕ ಪುಟಾಣಿ ಮಕ್ಕಳಿಗೆ ಬಿಸ್ಕೆಟ್ ಕೊಟ್ಟು ಹಸಿವು ತಣಿಸಿದ ಹೃದಯ ವಿದ್ರಾವಕ ಘಟನೆಯೂ ನಡೆಯಿತು. ಕುಟುಂಬದವರಿಗೆ ಅವಕಾಶ ಕಲ್ಪಿಸಿದ್ದರೆ ಅವರು ಊಟದ ವ್ಯವಸ್ಥೆಯಾದರೂ ಮಾಡುತ್ತಿದ್ದರು. ಕೊನೆಗೆ ಒಂದು ತೀರ್ಮಾನಕ್ಕೆ ಬಂದು ಒಂದು ದಿನದ ತಾತ್ಕಾಲಿಕವಾಗಿ ಹೋಟೆಲ್ ಕ್ವಾರೈಂಟೇನ್ ಗೆ ತಲುಪಿಸಲಾಗಿದೆ. ಇಂದು ವ್ಯವಸ್ಥೆ ಸರಿಪಡಿಸುವ ಬಗ್ಗೆ ಭರವಸೆ ನೀಡಲಾಗಿದೆ.
ಹೋಟೆಲ್ ಕ್ವಾರೈಂಟೇನ್ ವ್ಯವಸ್ಥೆಗೆ ಅನಿವಾಸಿಗಳಿಂದ ಹಣ ಪಡೆಯುವ ದಂಧೆಯ ಹಿಂದಿರುವ ಕಮಿಷನ್ ಲಾಬಿಗಳನ್ನು ಪತ್ತೆ ಹಚ್ಚಬೇಕು. ಇಸ್ಲಾಮಿಕ್ ಹಾಸ್ಟೆಲ್ ಗಳಲ್ಲಿ ಉಚಿತ ಕ್ವಾರೈಂಟೇನ್ ವ್ಯವಸ್ಥೆಗೆ ಸರಕಾರಿ ಸಿಬ್ಬಂದಿಗಳನ್ನು ನೇಮಿಸಿಕೂಡದಂತೆ ಹಿಂದಿರುವ ಕಾಣದ ಕೈಗಳು ಯಾವುದು ಎಂಬುದು ಬೆಳಕಿಗೆ ಬರಬೇಕಾಗಿದೆ.