janadhvani

Kannada Online News Paper

ಅನಾಥ ಮೃತ ದೇಹಗಳನ್ನು ಸಾಗಿಸುತ್ತಿದ್ದ ಆಟೋ ಹಸನಬ್ಬ ಇನ್ನಿಲ್ಲ

ಸೋಮವಾರಪೇಟೆ,ಏ.09: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಗರದ ಯಾವುದೋ ಬಾವಿ, ಹೊಳೆ ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಮೃತ ದೇಹ ಕಂಡುಬಂದಲ್ಲಿ ಸ್ಥಳಕ್ಕೆ ಹಾಜರಾಗುತ್ತಿದ್ದ ಆಟೋ ಚಾಲಕ ಹಸನಬ್ಬ (62) ಮೃತರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಆಲೆಕಟ್ಟೆರಸ್ತೆಯ ಕಬರಸ್ಥಾನದಲ್ಲಿ ನಡೆಯಲಿದೆ.

ಯಾವುದೇ ಸ್ಥಳದಲ್ಲಿ ಮೃತದೇಹ, ಅನಾಥ ಶವ ಕೊಳೆಯುತ್ತಿದ್ದರೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿ ಅಥವಾ ಪೊಲೀಸ್‌ ಠಾಣೆಗೆ ಕರೆ ಮಾಡುವುದಿಲ್ಲ. ಮೊದಲು ಇವರಿಗೆ ಕರೆ ಮಾಡುತ್ತಾರೆ. ತಕ್ಷಣವೇ ಇವರು ಹಾಜರಾಗುತ್ತಿದ್ದರು. ನಗರದ ಮಹದೇಶ್ವರ ಬ್ಲಾಕಿನ ಜನಾಬ್‌ ಅಬ್ದುಲ್‌ ಖಾದರ್‌ ಹಾಗೂ ಅಮ್ಮವ್ವ ದಂಪತಿ ಪುತ್ರ. ಪ್ರತಿಷ್ಠಿತ ಓಎಲ್‌ವಿ ಆಂಗ್ಲ ಮಾಧ್ಯಮ ಶಾಲೆ, ಸ್ಥಳೀಯ ಜೂನಿಯರ್‌ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ನಡೆ​ಸಿ​ದ್ದಾರೆ. ಹಣಕಾಸಿನ ತೊಂದರೆಯಿಂದ ವಿದ್ಯಾಭ್ಯಾಸಕ್ಕೆ ಗುಡ್‌ ಬೈ ಹೇಳಿದ ಜನಾಬ್‌ ಹಸನಬ್ಬ, ಜೀವನ ನಿರ್ವಹಣೆಗೆ ಆಟೋ ಡ್ರೈವರ್‌ ಆದರು.

ನಗರದಲ್ಲಿ ಅನಾಥ ಶವ ಕಂಡುಬಂದರೆ, ಅವುಗಳನ್ನು ತನ್ನ ಆಟೋದಲ್ಲಿ ಶವಾಗಾರಕ್ಕೆ ಸಾಗಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಬಾವಿಯಲ್ಲಿ ಕಂಡು ಬರುವ ಕೊಳೆತ ಶವಗಳನ್ನು ಯಾವುದೇ ಮುಜುಗರವಿಲ್ಲದೇ ಮೇಲೆತ್ತುತ್ತಾರೆ. ಅಪಾಯದ ಅರಿವಿದ್ದರೂ ಆ ಕೆಲಸವನ್ನು ಮುಂದುವರಿಸಿದ್ದರು. ಇಲ್ಲಿಯವರೆಗೆ ಒಟ್ಟು 50ಕ್ಕೂ ಅಧಿಕ ಶವಗಳನ್ನು ಶವಗಾರಕ್ಕೆ ಸಾಗಿಸಿದ್ದಾರೆ. ಕೆಲವು ಅನಾಥ ಶವಗಳನ್ನು ಇತರ ಆಟೋ ಚಾಲಕರು ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ಶವಸಂಸ್ಕಾರವನ್ನೂ ಮಾಡಿದ್ದಾರೆ.

ಇಂತಹ ಕಾರ್ಯವನ್ನು ಸಮಾಜಸೇವೆಯೆಂದೇ ಭಾವಿಸುವ ಹಸನಬ್ಬ ಅನೇಕ ಸಂಘ- ಸಂಸ್ಥೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ, ಕಾವೇರಿ ಕಾರ್ಮಿಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, 1984ರಲ್ಲಿ ಹವ್ಯಾಸಿ ಕಲಾವೃಂದ ಸಾಂಸ್ಕೃತಿಕ ಸಂಘ ಸ್ಥಾಪಿಸಿದ್ದರು. 1985ರಲ್ಲಿ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿಯಾಗಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಅಧ್ಯಕ್ಷರಾಗಿ ದುಡಿದಿದ್ದಾರೆ.

ನಗರದ ಜಲಾಲಿಯ ಮಸೀದಿಯ ಕಾರ್ಯದರ್ಶಿಯಾಗಿ, ಸಾರ್ವಜನಿಕ ಆಸ್ಪತ್ರೆ ಸಂದರ್ಶಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಮಾಜಸೇವೆ ಗುರುತಿಸಿದ ಇಲ್ಲಿನ ರೋಟರಿ ಸಂಸ್ಥೆ, ವಾಹನ ಚಾಲಕರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ವಿವಿಧ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

error: Content is protected !! Not allowed copy content from janadhvani.com