ಬೆಂಗಳೂರು, ಎ.5: ಎಲ್ಲೋ ಒಂದು ಸಣ್ಣ ಘಟನೆ ನಡೆದರೆ ಅದನ್ನು ಪರ್ವತೀಕರಿಸಿ ಇಡೀ ಮುಸ್ಲಿಂ ಸಮುದಾಯವನ್ನೇ ಅಪರಾಧಿಗಳೆಂದು ಬಿಂಬಿಸಿ ಕೋಮು ಧ್ರುವೀಕರಣ ನಡೆಸುವ ಮಾಧ್ಯಮ ಸಮೇತವಿರುವ ವರ್ಗಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಗರದಲ್ಲಿ ಇಂದು ಖಾಸಗಿ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಒಂದೆರಡು ಕಡೆ ಮನೆಗೆ ತಪಾಸಣೆಗಾಗಿ ತೆರಳಿದ ದಾದಿಯರ ಮೇಲೆ ಹಲ್ಲೆ ನಡೆದಿದೆ,ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ವೈರಸ್ ಹರಡುವ ಬಗ್ಗೆ ಅಲ್ಪಸಂಖ್ಯಾತ ಮುಸ್ಲಿಮ್ ಶಾಸಕರ ಸಭೆ ಕರೆದು ಚರ್ಚಿಸಿದ್ದೇನೆ. ಅವರು ಮೊದಲ ಬಾರಿಗೆ ಮಸೀದಿಗಳಲ್ಲಿ ನಮಾಝ್ ಮಾಡದೇ, ಮನೆಯಲ್ಲಿ ನಮಾಝ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅವರು ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾರೊಬ್ಬರೂ ಒಂದು ಶಬ್ದ ಅಲ್ಪಸಂಖ್ಯಾತ ಮುಸ್ಲಿಮರ ಬಗ್ಗೆ ಮಾತನಾಡಕೂಡದು. ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಯಾವುದಾದರೂ ಸಣ್ಣ ಘಟನೆ ನಡೆದರೆ ಅದಕ್ಕೆ ಇಡೀ ಮುಸ್ಲಿಂ ಸಮುದಾಯವೇ ಜವಾಬ್ದಾರರು ಎಂಬ ರೀತಿಯಲ್ಲಿ ಮಾತನಾಡಿದರೆ ಅಂತವರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಈ ವಿಷಯಲ್ಲಿ ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ಬಿಎಸ್ವೈ ಎಚ್ಚರಿಕೆ ನೀಡಿದ್ದಾರೆ.