ಮೊರೆನಾ: ತಬ್ಲೀಗ್ ಜಮಾಅತ್ ನ್ನು ಮುಂದಿಟ್ಟು ಮುಸ್ಲಿಮರು ಭಾರತದಲ್ಲಿ ಕೊರೋನಾ ಹರಡುತ್ತಿದ್ದಾರೆ ಎಂದು ಕೊರೋನಾ ವೈರಸ್ ಗೆ ಕೋಮು ಬಣ್ಣ ಹಚ್ಚಲು ತುದಿಗಾಲಲ್ಲಿ ನಿಂತಿರುವ, ಲಜ್ಡೆಗೆಟ್ಟ ಮಾಧ್ಯಮ ವರ್ಗ ತಲೆ ತಗ್ಗಿಸುವಂತಹಾ ಘಟನೆ, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ದುಬೈನಿಂದ ಮರಳಿದ ವ್ಯಕ್ತಿಯೊಬ್ಬ ತನ್ನ ತಾಯಿಯ ಶ್ರಾದ್ಧ ಕಾರ್ಯಕ್ರಮ ಏರ್ಪಡಿಸಿ 1,500 ಮಂದಿಯನ್ನು ಆಹ್ವಾನಿಸಿ ಔತಣಕೂಟ ಏರ್ಪಡಿಸಿದ್ದಾನೆ. ಶ್ರಾದ್ಧ ಏರ್ಪಡಿಸಿದ್ದ ವ್ಯಕ್ತಿಯು ಸೇರಿದಂತೆ ಆತನ ಕುಟುಂಬದ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಇದೀಗ ಸ್ಥಳೀಯ ಆಡಳಿತವು ಶ್ರಾದ್ಧ ಕಾರ್ಯಕ್ರಮ ನಡೆದ ಸ್ಥಳ ಸೇರಿದಂತೆ ಸಂಪೂರ್ಣ ಕಾಲೋನಿಗೆ ಸೀಲ್ ಹಾಕಿದೆ.
ವಿದೇಶದಿಂದ ವಾಪಸಾದವರು ಹೋಂ ಕ್ವಾರಂಟೈನ್ನಲ್ಲಿ ಇರಬೇಕು ಎಂಬ ಸಲಹೆಗಳ ನಡುವೆ ತಾಯಿ ಸಾವಿಗೆ ಗೌರವಾರ್ಪಣೆ ನೆಪದಲ್ಲಿ 1,500 ಮಂದಿಯನ್ನು ಆಹ್ವಾನಿಸಿ ಮತ್ತೊಂದು ಕೊರೋನಾ ಟೆರರಿಸ್ಟ್ ಸೃಷ್ಟಿಸಿದ್ದಾನೆ.
ದುಬೈ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ಮಾರ್ಚ್ 17ರಂದು ಮೊರೆನಾಗೆ ಆಗಮಿಸಿ, ಮಾರ್ಚ್ 20ಕ್ಕೆ ತಾಯಿಯ ಶ್ರಾದ್ಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಇದಕ್ಕೆ ಸುಮಾರು 1,500 ಮಂದಿಯನ್ನು ಆಹ್ವಾನಿಸಿದ್ದರು. ಮಾರ್ಚ್ 25ರಂದು ಕೊರೊನಾ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆ ಭೇಟಿ ನೀಡಿದ್ದರು. ಸುರೇಶ್ ಮತ್ತು ಅವರ ಪತ್ನಿ ಇಬ್ಬರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇಬ್ಬರಿಗೂ ಕೊರೊನಾ ವೈರಸ್ ಇರುವುದು ದೃಢ ಪಟ್ಟಿದೆ.
ಸುರೇಶ್ ಅವರನ್ನು ಸಂಪರ್ಕಿಸಿದವರು ಮತ್ತು ಸಂಬಂಧಿಕರು ಸೇರಿ 23 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10 ಮಂದಿಯ ವರದಿ ಪಾಸಿಟಿವ್ ಬಂದಿದೆ.
” ಇಬ್ಬರು ಕೊರೊನಾ ಸೋಂಕಿತರನ್ನು ಸಂಪರ್ಕಿಸಿದ 23 ಮಂದಿಯ ಮಾದರಿಯನ್ನು ಕೊರೊನಾ ವೈರಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಫಲಿತಾಂಶದ ವರದಿ ಬಂತು. 23 ಮಂದಿಯ ಪೈಕಿ 8 ಮಹಿಳೆಯರು ಸೇರಿ 10 ಮಂದಿಗೆ ಕೊರೊನಾ ವೈರಸ್ ಇರುವುದು ಸ್ಪಷ್ಟವಾಗಿದೆ. ನೆಗೆಟಿವ್ ವರದಿ ಬಂದಿರುವ ಉಳಿದವರನ್ನು 14 ದಿನಗಳ ಕಾಲ ಮೊರೆನಾ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ” ಎಂದು ಮೊರೊನಾ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆರ್ಸಿ ಬಂದಿಲ್ ತಿಳಿಸಿದ್ದಾರೆ.