ನವದೆಹಲಿ,ಏ.03|ಕೇರಳ- ಕರ್ನಾಟಕ ಗಡಿ ಸಮಸ್ಯೆಯಲ್ಲಿ ಕರ್ನಾಟಕ ಸರಕಾರಕ್ಕೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ. ಗಡಿಯನ್ನು ತಕ್ಷಣ ತೆರೆಯಬೇಕು ಮತ್ತು ರೋಗಿಗಳನ್ನು ಕೊಂಡೊಯ್ಯಲು ಅನುಮತಿಸಬೇಕು ಎಂದು ಒತ್ತಾಯಿಸಿದ ಕೇರಳ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೇರಳ ಹೈಕೋರ್ಟ್ ಕರ್ನಾಟಕವು ಕೇರಳ -ಕರ್ನಾಟಕ ಗಡಿಯನ್ನು ತುರ್ತು ಅಗತ್ಯಗಳಿಗೆ ಮುಕ್ತಗೊಳಿಸಬೇಕು ಎಂದು ಆದೇಶಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರ ಆರೋಗ್ಯ ಮತ್ತು ಕುಟುಂಬಗಳ ಇಲಾಖೆಯ ಕಾರ್ಯದರ್ಶಿ ಕೂಡಲೆ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು.
ಅಲ್ಲದೆ, ಕೇರಳದಿಂದ ಬರುವ ಕೊರೊನಾ ಸೋಂಕಿತರು ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯಲು ಸುಲಭವಾಗಿಸುವಂತೆ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದೆ.
ಕಳೆದ ಹತ್ತು ದಿನಗಳಲ್ಲಿ ಕಿಡ್ನಿ, ಹೃದ್ರೋಗ ಕಾಯಿಲೆಗಳಿಂದಾಗಿ ಗಡಿನಾಡಿನ ಆರು ಜನ ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದು, ಇನ್ನೂ ನೂರಾರು ಜನ ವಿವಿಧ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ಕೇರಳ ಸರಕಾರ ತಿಳಿಸಿದೆ.