ಬೆಂಗಳೂರು ,ಮಾ.30:ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ಭಾರತದಲ್ಲಿ ದೈನಂದಿನ ಹರಡುತ್ತಲೇ ಇದ್ದು, ಹೀಗಾಗಿ ಕೇಂದ್ರ ಸರ್ಕಾರ 21 ದಿನಗಳ ಲಾಕ್ಡೌನ್ ಆದೇಶ ಹೊರಡಿಸಿದೆ. ಆದಾಗ್ಯೂ ಅನೇಕರು ರಸ್ತೆಯ ಮೇಲೆ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಎಷ್ಟೇ ಸೂಚನೆ ನೀಡಿದರು ಜನರು ಮಾತ್ರ ಬದಲಾಗುತ್ತಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಲಾಕ್ಡೌನ್ ವೇಳೆ ಕಾರಣ ಇಲ್ಲದೆ ಓಡಾಡುವವರ ವಾಹನವನ್ನು ಲಾಕ್ಮಾಡಲು ರಾಜ್ಯ ಸರ್ಕಾರ ಕಠಿಣ ಆದೇಶವನ್ನು ಹೊರಡಿಸಿದೆ. ನಿನ್ನೆಯಿಂದಲೇ ಈ ನಿಯಮ ಜಾರಿಗೆ ಬಂದಿದೆ. ಅಚ್ಚರಿ ಎಂದರೆ ನಿನ್ನೆ ಒಂದೇ ದಿನ 900 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. ದೇಶಾದ್ಯಂತ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,024ಕ್ಕೆ ಮುಟ್ಟಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 901 ಮಂದಿಯಲ್ಲಿ ಈಗ ಕೊರೋನಾ ಸೋಂಕು ಇರುವುದು (Active cases) ಪತ್ತೆಯಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ. 96 ಮಂದಿ ಸೋಂಕಿನಿಂದ ಮುಕ್ತಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ .