ತಿರುವನಂತಪುರಂ: ರಾಜ್ಯಕ್ಕೆ ಅಗತ್ಯವಾದ ಸರಕು ಸಾಮಗ್ರಿಗಳನ್ನು ಸಾಗಿಸಲು ನೆರವಾಗುವ ಪ್ರಮುಖ ರಾಜ್ಯ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ್ದಾರೆ.ಅಲ್ಲದೆ ಕರ್ನಾಟಕದ ಈ ಕ್ರಮದ ಕುರಿತು ತಕ್ಷಣ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.
ವಿರಾಜಪೇಟೆ ಮೂಲಕ ಹಾದುಹೋಗುವ ತಲಶೇರಿ-ಕೊಡಗು ರಾಜ್ಯ ಹೆದ್ದಾರಿ 30 ಗಡಿಯನ್ನು ಪೋಲೀಸರು ಮುಚ್ಚಿದ್ದಾಗಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೇರಳ ಸಿಎಂ ಹೇಳಿದ್ದಾರೆ.ಈ ಮಾರ್ಗವನ್ನು ನಿರ್ಬಂಧಿಸಿದರೆ, ಲಾರಿಗಳು ರಾಜ್ಯವನ್ನು ತಲುಪಲು ಸುತ್ತು ಬಳಸಿ ಹೆಚ್ಚಿನ ದೂರ ಕ್ರಮಿಸಬೇಕಾಗುವುದು ಎಂದು ಅವರು ಹೇಳಿದರು.
ಈ ಮಾರ್ಗವು ಕೇರಳಕ್ಕೆ ಅಗತ್ಯ ವಸ್ತುಗಳ ಸರಬರಾಜಿಗೆ ಮುಖ್ಯವಾಗುತ್ತದೆ. ಇದನ್ನು ನಿರ್ಬಂಧಿಸಿದರೆ, ಅಗತ್ಯ ಸರಕುಗಳನ್ನು ಸಾಗಿಸುವ ವಾಹನಗಳು ನಮ್ಮ ರಾಜ್ಯವನ್ನು ತಲುಪಲು ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ರಾಷ್ಟ್ರೀಯ ಲಾಕ್ಡೌನ್ನ ಪರಿಸ್ಥಿತಿಯಲ್ಲಿ ಇದು ಕೇರಳ ಜನರಿಗೆ ಹೆಚ್ಚಿನ ಕಷ್ಟಕ್ಕೆ ಕಾರಣವಾಗುತ್ತದೆ” ಸಿಎಂ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ.
“ಬಿಕ್ಕಟ್ಟಿನ ಈ ಕ್ಷಣದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಅಡ್ಡಿಯಾಗುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ನೀವು ಹೇಳಿದ್ದಿರಿ” ಪತ್ರದ ಪ್ರತಿಯನ್ನು ಶನಿವಾರ ಇಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಕೇರಳ ರಾಜ್ಯ ಕೋವಿಡ್ ವಿರುದ್ಧ ವ್ಯಾಪಕ ಹೊರಾಟ ನಡೆಸಿದ್ದು ಅಗತ್ಯ ಸರಕುಗಳ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಪಿಣರಾಯಿ ವಿಜಯನ್ ಮೋದಿಯವರನ್ನು ವಿನಂತಿಸಿದರು.