ಬೆಂಗಳೂರು:ವಿಶ್ವದಾದ್ಯಂತ ಕೋವಿಡ್ ಭೀತಿಯಲ್ಲಿ ಜನತೆ ತತ್ತರಿಸಿರುವಾಗ ಕನ್ನಡದ ಪ್ರಮುಖ ಪತ್ರಿಕೆಯೊಂದು ಕೋರೋನ ಸೋಂಕಿಗೂ ಮುಸ್ಲಿಮ್ ಸಮುದಾಯಕ್ಕೂ ತಳುಕುಹಾಕಿ ವರದಿ ಮಾಡಿರುವುದನ್ನು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಖಂಡಿಸಿದೆ.
ರಾಜ್ಯದ ಎಲ್ಲಾ ಪ್ರಮುಖ ವಿದ್ವಾಂಸರು ಶುಕ್ರವಾರದ ಜುಮಾ ನಮಾಝನ್ನು ಮಾಡದಂತೆ ಸಮುದಾಯಕ್ಕೆ ಕರೆ ನೀಡಿದ್ದಾರೆ. ಆದರೂ ಪತ್ರಿಕೆಯು ಪೂರ್ವಾಗ್ರಹ ವರದಿ ಮಾಡಿರುವುದು ಆತಂತಕಕಾರಿಯಾಗಿದೆ. ಇಂತಹ ಮಾರಕ ವಿಪತ್ತುಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಸಹಕರಿಸಬೇಕಾದ ಸಂದರ್ಭದಲ್ಲೂ ಮಾನವೀಯತೆ ಮರೆತು ಕೋಮಪ್ರಚೋದಿತ ವರದಿ ಮಾಡುವ ಪತ್ರಕರ್ತರು ಕನ್ನಡ ಪತ್ರಿಕೋದ್ಯಮಕ್ಕೇ ಕಳಂಕರಾಗಿದ್ದಾರೆ.
ಕನ್ನಡ ಪತ್ರಿಕೋದ್ಯಮವು ಇದನ್ನು ಖಂಡಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿ ಆಗ್ರಹಿಸಿದ್ದಾರೆ.ಕೋವಿಡ್ ಮೊದಲು ಕಂಡು ಬಂದ ಚೀನಾದಲ್ಲಾಗಲೀ ನಂತರ ವ್ಯಾಪಕವಾಗಿ ಹರಡಿರುವ ಇಟಲಿ, ಸ್ಪೈನ್, ಅಮೆರಿಕ ಗಳಲ್ಲಿ ಯಾವ ಸಮುದಾಯದ ಪಾತ್ರ ಇದೆ ಎಂಬ ಬಗ್ಗೆ ಯಾರೂ ವಿಶ್ಲೇಷಣೆ ಮಾಡಿಲ್ಲ. ಅಂತಹದ್ದೊಂದು ಚರ್ಚೆಯೇ ಅಪ್ರಸ್ತುತ ಹಾಗೂ ಅಮಾನವೀಯ ಎಂದು ಅವರು ಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.