janadhvani

Kannada Online News Paper

ಲಾಕ್‌ಡೌನ್‌ನಿಂದಾಗಿ ಭಾರತಕ್ಕೆ 9 ಲಕ್ಷ ಕೋಟಿ ನಷ್ಟ- ಆರ್ಥಿಕ ತಜ್ಞರು

ಮುಂಬೈ,ಮಾರ್ಚ್‌ 25:ವಿಶ್ವಾದ್ಯಂತ ಭೀಕರವಾಗಿ ಹರಡಿರುವ ಕೊರೋನಾ ವೈರಸ್ ನ್ನು ಭಾರತದಲ್ಲಿ ಹಬ್ಬದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕರೆ ನೀಡಿರುವ 21`ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ ಸುಮಾರು 120 ಬಿಲಿಯನ್ (9 ಲಕ್ಷ ಕೋಟಿ ) ಕಳೆದುಕೊಳ್ಳಲಿದೆ. ಅಂದರೆ ಅಂದಾಜು ಭಾರತದ ಶೇ. 4 ರಷ್ಟು ಜಿಡಿಪಿ ನಷ್ಟವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಘೋಷಿಸುವ ಅಗತ್ಯವಿದೆ ಎಂದು ಆರ್ಥಿಕ ತಜ್ಞರು ಸೂಚನೆ ನೀಡಿದ್ದಾರೆ.

ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿರುವ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ದರ ಕಡಿತವನ್ನು ನೀಡಲು ಸಜ್ಜಾಗಿದೆ. ಅಲ್ಲದೆ, ಹಣಕಾಸಿನ ಕೊರತೆಯ ಗುರಿಗಳನ್ನು ಸಹ ಉಲ್ಲಂಘಿಸಲಾಗುವುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ದೇಶದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳವಾರ ರಾತ್ರಿ 12 ಗಂಟೆಯಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಮೂರು ವಾರಗಳ ಮಟ್ಟಿಗೆ ಲಾಕ್‌ಡೌನ್ ಮಾಡಲು ಆದೇಶಿಸಿದರು. ಪರಿಣಾಮ ಬುಧವಾರ ಷೇರು ಮಾರುಕಟ್ಟೆ ವ್ಯವಹಾರ ಆರಂಭಿಸುತ್ತಿದ್ದಂತೆ ಈಕ್ವಿಟಿ ಶೇ.0.47 ರಷ್ಟು ಕುಸಿತ ಅನುಭವಿಸಿದೆ.

ಈ ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ 120 ಬಿಲಿಯನ್, ದೇಶದ ಜಿಡಿಪಿ ಮೌಲ್ಯದ ಶೇ.4 ರಷ್ಟು ಹಣ ನಷ್ಟ ಉಂಟಾಗಲಿದೆ ಎಂದು ಅಂದಾಜು ಮಾಡಲಾಗಿರುವುದಾಗಿ ಬ್ರಿಟಿಷ್ ಬ್ರೋಕರೇಜ್ ಬಾರ್ಕ್ಲೇಸ್ ಈಗಾಗಲೇ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.

ಈ ಹಿಂದೆ ಮಹಾರಾಷ್ಟ್ರ ಸೇರಿದದಂತೆ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ, ಅದಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಘೋಷಿಸಲಾಗಿರುವ 21 ದಿನಗಳ ಲಾಕ್‌ಡೌನ್‌ನಲ್ಲಿ ನಿರೀಕ್ಷೆ ಮೀರಿ ದೇಶಕ್ಕೆ ಆರ್ಥಿಕ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರ ಮೌನವಹಿಸಿದೆ ಎಂದೂ ಹಲವು ಆರ್ಥಿಕ ತಜ್ಞರು ಆರೋಪಿಸಿದ್ದಾರೆ.

error: Content is protected !! Not allowed copy content from janadhvani.com