janadhvani

Kannada Online News Paper

ಮೋದಿಯವರ ‘ತಾಲಿ ಬಜಾವೋ’ ಹೇಳಿಕೆ, ‘ಲಾಕ್ ಡೌನ್’ ಗಂಭೀರತೆ ಕಳಕೊಂಡಿದೆ- ಶಿವಸೇನೆ ಆರೋಪ

ಮುಂಬೈ: ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತಿತರರನ್ನು ಚಪ್ಪಾಳೆ ತಟ್ಟಿ ಶ್ಲಾಘಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಕಾರಣದಿಂದ ರೋಗದ ತೀವ್ರತೆ ಜನರಿಗೆ ಅರ್ಥವಾಗಿಲ್ಲ ಎಂದು ಶಿವಸೇನೆ ಹೇಳಿದೆ.

ಮೋದಿಯವರ ಈ ಹೇಳಿಕೆಯಿಂದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಜಾರಿಗೊಳಿಸಲಾಗುತ್ತಿರುವ ಲಾಕ್​ಡೌನ್​ನ ಗಂಭೀರತೆಯನ್ನು ಜನರು ಅರಿತುಕೊಳ್ಳುತ್ತಿಲ್ಲ ಎಂದು ಮಂಗಳವಾರ ಶಿವಸೇನೆ ಹೇಳಿದೆ.ಸೇನಾ ಮುಖವಾಣಿ ಸಾಮ್ನಾದಲ್ಲಿ ವಿಷಯದ ಬಗ್ಗೆ ಭಯ ಇದ್ದಲ್ಲಿ ನಾಗರಿಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಸಂಪಾದಕೀಯ ಹೇಳಿದೆ.

ಜನರಲ್ಲಿ ಭಯವು ಹೆಚ್ಚಾಗಲು ಪ್ರಾರಂಭಿಸಿದಾಗ, ಆರೋಗ್ಯ ಕಾರ್ಯಕರ್ತರ ಮನೋಸ್ಥೈರ್ಯವನ್ನು ಹೆಚ್ಚಿಸಲು ಪಿಎಂ ಮೋದಿ ಜನರು ತಮ್ಮ ಬಾಲ್ಕನಿಗಳಲ್ಲಿ ಅಥವಾ ಕಿಟಕಿಗಳ ಮೂಲಕ ಚಪ್ಪಾಳೆ ತಟ್ಟುವಂತೆ ಕೇಳಿದ್ದು ಸರಿಯಲ್ಲ ಎಂದು ಪತ್ರಿಕೆ ಹೇಳಿದೆ.ಪ್ರಧಾನಿ ಕರೆಗೆ ಸ್ಪಂಧಿಸಿರುವ ಜನ ರಸ್ತೆಗಳಲ್ಲಿ ನೃತ್ಯ ಮಾಡುವ ಮೂಲಕ ಪರಿಸ್ಥಿತಿಯನ್ನು ಹಬ್ಬದಂತೆ ಮಾಡಿದರು ಎಂದು ಪತ್ರಿಕೆ ಹೇಳಿದೆ.

ರಾಜಕೀಯ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಘೋಷಣೆಗಳನ್ನು ಕೂಗುತ್ತಿದ್ದರು. ರಾಜ್ಯ ಸರ್ಕಾರ ಆದೇಶಿಸಿದ ಲಾಕ್​ಡೌನ್​ ಪಾಲಿಸುವುದು ನಾಗರಿಕರ ಕರ್ತವ್ಯ” ಎಂದು ಪಕ್ಷ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಗ ಜನರು ಮನೆಯಲ್ಲಿಯೇ ಇದ್ದು ಲಾಕ್​ಡೌನ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. “ಆದರೆ ಭಾನುವಾರ ಸಂಜೆ ನಡೆದ ಘಟನೆಯ ನಂತರ ಜನರು ಕೊರೋನಾ ವೈರಸ್​ಗೆ ಹೆದರುವುದಿಲ್ಲ” ಎಂದು ಪತ್ರಿಕೆ ಆರೋಪಿಸಿದೆ.ರಾಜಕೀಯ ಪರಿಸ್ಥಿತಿಯ ಬಗ್ಗೆ ಜನರು ಗಂಭೀರವಾಗಿ ಯೋಚಿಸದಿದ್ದರೆ ಪ್ರಧಾನಿ ಅಥವಾ ಮುಖ್ಯಮಂತ್ರಿಗಳ ಕಾಳಜಿಯ ಉಪಯೋಗವೇನು? ಎಂದು ಸೇನೆ ಪ್ರಶ್ನಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗಡಿಗಳನ್ನು ಮುಚ್ಚಿ, ವಿಮಾನಯನವನ್ನು ರದ್ದುಗೊಳಿಸಿದಾಗ, ಕೇಂದ್ರ ವಿಮಾನಯಾನ ಸಚಿವಾಲಯವು ವಿರುಧ್ದವಾದ ಹೇಳಿಕೆಯನ್ನು ನೀಡುತ್ತದೆ. ಹೀಗೆ ರಾಜ್ಯ ಮತ್ತು ಕೇಂದ್ರಗಳ ನಡುವೆ ಸಮನ್ವಯತೆ ಇರದಿದ್ದರೆ ರೋಗ ಹರಡುವುದನ್ನು ಹೇಗೆ ತಡೆಯಲು ಸಾಧ್ಯ ಎಂದು ಸೇನೆ ಕೇಳಿದೆ.

ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಕಷ್ಟು ವೈದ್ಯಕೀಯ ಉಪಕರಣಗಳ ಕೊರತೆಯಿದೆ ಎಂದು ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಏಕೆಂದರೆ ಪ್ರಧಾನ ಆರೋಗ್ಯ ಸಂಸ್ಥೆ ಕೇಂದ್ರದ ವ್ಯಾಪ್ತಿಗೆ ಬರುತ್ತದೆ ಎಂದು ಶಿವಸೇನೆ ಸಲಹೆ ನೀಡಿದೆ.

ಕಳೆದ ಭಾನುವಾರ ಕೊರೋನಾ ವೈರಸ್ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿತ್ತು. ಆದರೆ ಪ್ರಧಾನಿ ಮೋದಿಯವರು ಸಂಜೆ 5 ಗಂಟೆಗೆ ಮನೆಯ ಹೊರಗೆ ಬಂದು ವೈದ್ಯರು ಮತ್ತು ಇತರರಿಗೆ ಅವರ ಸೇವೆಗಾಗಿ ಚಪ್ಪಾಳೆ ತಟ್ಟುವಂತೆ ಮನವಿ ಮಾಡಿದ್ದರು. ಆದರೆ ಕೆಲ ಜನರು ರಸ್ತೆಗಿಳಿದು ಹಬ್ಬದಂತೆ ಸಂಭ್ರಮಿಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿತ್ತು.

error: Content is protected !! Not allowed copy content from janadhvani.com