ಬೆಂಗಳೂರು,ಮಾ. 23: ಕೊರೋನಾ ವೈರಸ್ ಸೋಂಕು ಅಪಾಯದ ಮಟ್ಟಕ್ಕೆ ಹರಡುವ ಪರಿಸ್ಥಿತಿ ಬಂದಿದೆ. ದೇಶದ 14-15 ರಾಜ್ಯಗಳು ಲಾಕ್ ಡೌನ್ ಮಾಡಿವೆ. ಕರ್ನಾಟಕದಲ್ಲೂ ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ. ಈ ವೇಳೆ, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟು, ಶಾಲೆ ಕಾಲೇಜು, ಕಚೇರಿ ಇತ್ಯಾದಿಗಳನ್ನು ಬಂದ್ ಮಾಡಿ ಎಲ್ಲಾ ನಾಗರಿಕರು ಮನೆಯಲ್ಲೇ ಕೂರಬೇಕಾಗಬಹುದು.
ಲಾಕ್ ಡೌನ್ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಿರುವುದು ಬಡವರೇ ಆಗಿದ್ದಾರೆ. ಈ ವೇಳೆ ಅವರಿಗೆ ಸಹಾಯವಾಗಿ ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತ ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಡೀ ದಿನ ಇಲ್ಲಿ ಆಹಾರ ಲಭ್ಯವಿರಲಿದೆ. ಇಂದು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ಧಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 30 ಫೀವರ್ ಕ್ಲಿನಿಕ್ಗಳಿಗೆ ಕೆಲ ಇಂದಿರಾ ಕ್ಯಾಂಟೀನ್ನ ಜಾಗವನ್ನು ಬಳಸಿಕೊಳ್ಳುವ ಚಿಂತನೆಯೂ ಇದೆ. ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹೋಟೆಲ್ಗಳು ತೆರೆಯಬಹುದಾದರೂ ಜನರು ಅಲ್ಲಿ ಕೂತು ತಿನ್ನುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಮನೆಗೆ ಹೋಗಿ ಆಹಾರ ಸೇವಿಸಬೇಕಾಗುತ್ತದೆ. ಇಂದಿರಾ ಕ್ಯಾಂಟೀನ್ನಲ್ಲಿ ಯಾವ ರೀತಿ ವ್ಯವಸ್ಥೆ ಮಾಡಲಾಗುತ್ತದೆ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ಈ ಕ್ಯಾಂಟೀನ್ಗಳಲ್ಲಿ ಜನರಿಗೆ ಸ್ಥಳದಲ್ಲೇ ತಿನ್ನಲು ಅವಕಾಶ ನೀಡಲಾಗಿದೆ.