ನವದೆಹಲಿ,ಮಾ. 20: ನಿರ್ಭಯಾ ಹಂತಕರಿಗೆ ಇಂದು ಮುಂಜಾನೆ 5.30ಕ್ಕೆ ಮರಣದಂಡನೆ ಜಾರಿ ಮಾಡಲಾಯಿತು. ಕಪ್ಪುಬಟ್ಟೆ ಧರಿಸಿದ್ದ ಕೈದಿಗಳನ್ನು ವಾರ್ಡನ್ ಮತ್ತು ಹೆಡ್ವಾರ್ಡನ್ ಗಲ್ಲು ಕೋಣೆಗೆ ಕರೆತಂದಿದ್ದರು. ಮ್ಯಾಜಿಸ್ಟ್ರೇಟ್ ಸಹಿ ಹಾಕಿದ್ದ ಡೆತ್ ವಾರಂಟ್ ಓದಿದ ನಂತರ ನೇಣುಗಂಬಕ್ಕೆ ಏರಿಸಲಾಯಿತು.
ಗಲ್ಲು ಶಿಕ್ಷೆ ಜಾರಿಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ನಿರ್ಭಯಾ ಪ್ರಕರಣದ ಅಪರಾಧಿಗಳು ದೆಹಲಿ ಹೈಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಅರ್ಜಿ ಹೈಕೋರ್ಟ್ನಲ್ಲಿ ವಜಾ ಆದ ನಂತರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ನ್ಯಾಯಮೂರ್ತಿ ಭಾನುಮತಿ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ಅಪರಾಧಿಗಳ ಅರ್ಜಿ ತಳ್ಳಿ ಹಾಕಿ, ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು.
ಮುಕೇಶ್ ಸಿಂಗ್ (32), ಪವನ್ ಗುಪ್ತಾ (25, ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31)- ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು 5.30ಕ್ಕೆ ಗಲ್ಲಿಗೇರಿಸಲಾಗಿದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದ್ದಾರೆ. ತಿಹಾರ್ ಜೈಲಿನಲ್ಲಿ ಇದೇ ಮೊದಲ ಬಾರಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಿದ್ದು.
2012 ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ತಪ್ಪಿಸತ್ಥರಾದ ಇವರಿಗೆ ಮರಣ ದಂಡನೆ ವಿಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಯು ಘಟನೆ ನಡೆದ 13 ದಿನಗಳ ನಂತರ ಸಾವಿಗೀಡಾಗಿದ್ದಳು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗಿದ್ದರೂ ಜನವರಿ ತಿಂಗಳಿನಿಂದ ಮೂರು ಬಾರಿ ಗಲ್ಲಿಗೇರಿಸುವ ದಿನಾಂಕ ಬದಲಾಗಿತ್ತು. ಅಪರಾಧಿಗಳು ಕಾನೂನಿನ ಪ್ರಕ್ರಿಯೆಗಳನ್ನು ಪೂರೈಸಲು ತೆಗೆದುಕೊಂಡ ಸಮಯದಿಂದಾಗಿ ದಿನಾಂಕ ಬದಲಾಗುತ್ತಲೇ ಇತ್ತು.
ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.ಇದರಲ್ಲಿ ಆರನೇ ಆರೋಪಿ ರಾಮ್ ಸಿಂಗ್ 2013 ಮಾರ್ಚ್ 11ರಂದು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು .ಅದೇ ವೇಳೆ ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿದೆ.
‘ಕೊನೆಗೂ ಅವರನ್ನು ಗಲ್ಲಿಗೇರಿಸಲಾಯಿತು. ಇದೊಂದು ಸುದೀರ್ಘ ಹೋರಾಟ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿತು.ದೇಶದ ಹೆಣ್ಣು ಮಕ್ಕಳಿಗೆ ಈ ದಿನ ಅರ್ಪಣೆ. ಸರ್ಕಾರ ಹಾಗೂ ಕಾನೂನು ವ್ಯವಸ್ಥೆಗೆ ಧನ್ಯವಾದ’ ಎಂದು ನಿರ್ಭಯಾಳ ಅಮ್ಮ ಪ್ರತಿಕ್ರಿಯಿಸಿದ್ದಾರೆ.
ನಾನು ಸುಪ್ರೀಂಕೋರ್ಟ್ನಿಂದ ಬಂದ ಕೂಡಲೇ ಮಗಳ ಫೋಟೊ ತಬ್ಬಿಕೊಂಡು ಇವತ್ತು ನಿನಗೆ ನ್ಯಾಯ ಲಭಿಸಿತು ಎಂದು ಹೇಳಿದೆ. ವಿಳಂಬವಾದರೂ ನ್ಯಾಯ ಸಿಕ್ಕಿತು ಎಂದು ಅವರು ಹೇಳಿದ್ದಾರೆ.ಮಗಳಿಗೆ ನ್ಯಾಯ ಸಿಕ್ಕಿದ ಈ ದಿನವನ್ನು ನ್ಯಾಯದಿನ ಎಂದು ಘೋಷಿಸಬೇಕು ಎಂದು ನಿರ್ಭಯಾಳ ಅಪ್ಪ ಹೇಳಿದ್ದಾರೆ.