ಬೆಂಗಳೂರು,ಮಾ.09:ವಿಶ್ವಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಭಯ ಭೀತಿ ಹುಟ್ಟಿಸಿರುವ ಕೊರೊನಾ ಸೊಂಕು, ರಾಜ್ಯದಲ್ಲೂ ಭಯದ ವಾತಾವರಣ ನಿರ್ಮಾಣ ಮಾಡಿದೆ. ರಾಜ್ಯದಲ್ಲಿ ಮೊದಲ ಕೊರೊನಾ ಕೇಸ್ ದೃಢಪಟ್ಟಿದೆ. ರಾಜ್ಯದವರೇ ಆದ ಅಮೆರಿಕದಿಂದ ಬಂದಿರುವ ಸಾಫ್ಟ್ವೇರ್ ಎಂಜಿನಿಯರ್ನಲ್ಲಿ ಸೋಂಕು ಪತ್ತೆಯಾಗಿದೆ.
ಇವರು ಮಾ. 1ರಂದು ರಾತ್ರಿ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿದಿದ್ದರು. ಜ್ವರ, ಕೆಮ್ಮು, ನೆಗಡಿಯಿಂದಾಗಿ ಮಾ. 5ರಂದು ರಾಜೀವ್ ಗಾಂಧಿ ಹೃದಯ ರೋಗ ಆಸ್ಪತ್ರೆಗೆ ದಾಖಲಾಗಿದ್ದ, ಅವರಿಗೆ ಸೋಂಕು ತಗುಲಿರೋದು ರಕ್ತದ ಮಾದರಿ ಪರೀಕ್ಷೆಯಿಂದ ದೃಢ ಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಈ ಸಂಬಂಧವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗದ ನರ್ಸರಿಯಿಂದ 5 ನೇ ತರಗತಿವರೆಗೆ ನಾಳೆಯಿಂದಲೇ ರಜೆ ಘೋಷಿಸಲಾಗಿದೆ. ಪರೀಕ್ಷೆ ಸಮಯ ಇದಾಗಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ರಜೆ ಮುಂದುವರಿಯಲಿದೆ.
ಶೈಕ್ಷಣಿಕ ಪ್ರವಾಸ ಕೈಗೊಳ್ಳುವವರು ಎಚ್ಚರ
ಶಾಲಾ, ಕಾಲೇಜುಗಳಲ್ಲಿ ಬೇಸಿಗೆ ರಜೆಯ ಮುಂಚಿತವಾಗಿ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದು, ದ.ಕ.ಜಿಲ್ಲೆಗಳಿಂದ ಸಾಮಾನ್ಯವಾಗಿ ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತದೆ.
ಇದೀಗ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ದೂರದ ಪ್ರವಾಸವನ್ನು ಕೈಬಿಟ್ಟು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.