janadhvani

Kannada Online News Paper

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ

ನವದೆಹಲಿ ,ಮಾ.8: ವಿಶ್ವಾದ್ಯಂತ ವೇಗವಾಗಿ ಪಸರಿಸುತ್ತಿರುವ ಕೋವಿಡ್ 19 ಎಂಬ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಈ ವೈರಸ್​ ಪೀಡಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಹೊಸ ಐದು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕು ತಗುಲಿದವರ ಸಂಖ್ಯೆ ಭಾರತದಲ್ಲಿ 39ಕ್ಕೆ ಏರಿಕೆ ಆಗಿದೆ.

ಕೇರಳದಲ್ಲಿ ಕೊರೊನಾ ವೈರಸ್​ ತಗುಲಿದ ಐದು ಜನರು ಒಂದೇ ಕುಟುಂಬದವರಾಗಿದ್ದಾರೆ. ಈ ಐವರ ಪೈಕಿ ಮೂವರು ಈ ಮೊದಲು ಇಟಲಿಗೆ ತೆರಳಿದ್ದರು. ಈ ವೇಳೆ ಅವರಿಗೆ ಕೊರೊನಾ ವೈರಸ್​ ತಗುಲಿರಬಹುದು ಎಂದು ಶಂಕಿಸಲಾಗಿದೆ. ಇವರನ್ನು ಸಂಪರ್ಕಿಸಿದ ಎಲ್ಲರನ್ನೂ ಸದ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಮಂಗಳವಾರ ದೇಶಾದ್ಯಂತ ಹೋಳಿ ಆಚರಣೆ ಮಾಡಲಾಗುತ್ತಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ಅನೇಕ ಭಾಗದಲ್ಲಿ ಹೋಳಿ ಆಚರಣೆಗೆ ಬ್ರೇಕ್​ ನೀಡಲು ನಿರ್ಧರಿಸಲಾಗಿದೆ. ಇನ್ನು, ಚಿಕನ್​, ಮಟನ್​ ಹಾಗೂ ಸಮುದ್ರ ಆಹಾರ ತಿನ್ನುವುದರಿಂದ ಕೊರೊನಾ ಬರುತ್ತದೆ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಈ ರೀತಿ ಆಹಾರಗಳ ಸೇವನೆಯಿಂದ ಕೊರೊನಾ ಬರುವುದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಚೀನಾದಲ್ಲೇ ಹೆಚ್ಚಾಗಿ ಆರ್ಭಟಿಸುತ್ತಿರುವ ಈ ವೈರಸ್​ ಈಗಾಗಲೇ 90ಕ್ಕೂ ಹೆಚ್ಚು ದೇಶಗಳಿಗೆ ಅಡಿ ಇಟ್ಟಿದೆ. ವೈರಸ್​ನ ಸೋಂಕಿಗೆ ಒಳಗಾದವರ ಸಂಖ್ಯೆ 1 ಲಕ್ಷ ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೂ ಹೆಚ್ಚು.

error: Content is protected !! Not allowed copy content from janadhvani.com