ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ನಿಂದ ಪ್ರತಿಭಟನೆ- ರಾಷ್ಟ್ರಪತಿಗಳಿಗೆ ಮನವಿ
ಬೆಳ್ತಂಗಡಿ: ಗುಜರಾತ್ನಲ್ಲಿ ಅಂದು ನಡೆದಿದ್ದ ಕೋಮು ಗಲಭೆ ಕೇವಲ ಕೋಮು ಗಲಭೆಯಾಗಿರದೆ ಅದೊಂದು ಪೂರ್ವನಿರ್ಧರಿತ ಹತ್ಯಾಕಾಂಡವಾಗಿತ್ತೋ ಅದೇ ರೀತಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮಾರಣಹೋಮ ಕೂಡ ಆಡಳಿತದ ಕಡೆಯಿಂದ ಆಗಿರುವ ವ್ಯವಸ್ಥಿತ ಹತ್ಯಾಕಾಂಡ ಎಂದು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಆರೋಪಿಸಿದರು.
ಸುನ್ನೀ ಸ್ಟೂಡೆಂಟ್ಸ್ ಫಡೆರೇಶನ್ (ಎಸ್ಸೆಸ್ಸೆಫ್) ಜಿಲ್ಲಾ ನಿರ್ದೇಶನದಂತೆ ಜಿಲ್ಲಾ ವ್ಯಾಪ್ತಿಯ 11 ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಿರುವ, ದೆಹಲಿ ಘಟನೆ ವಿರೋಧಿಸಿ ಹೋರಾಟದ ಭಾಗವಾಗಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಮಾ. 2 ರಂದು ನಡೆದ ಜಿಲ್ಲೆಯ ಪ್ರಥಮ ಪ್ರತಿರೋಧ ಸಭೆಯಲ್ಲಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ನಝೀರ್ ಮದನಿ ಪುಂಜಾಲಕಟ್ಟೆ, ಉಪಾಧ್ಯಕ್ಷ ಕೆರೀಂ ಸಖಾಫಿ ನಾಳ, ಪ್ರಧಾನ ಕಾರ್ಯದರ್ಶಿ ಪಿ.ಯು ಶರೀಫ್ ನಾವೂರು, ಕಾರ್ಯದರ್ಶಿ ತೌಫೀಕ್ ವೇಣೂರು, ಡಿವಿಷನ್ ನಾಯಕರಾದ ಝಮೀರ್ ಸಅದಿ ಲಾಯಿಲ, ನಝೀರ್ ಅಹ್ಸನಿ ಪರಪ್ಪು, ಅಶ್ರಫ್ ನೆರಿಯ, ಕಮಾಲ್ ಮುಸ್ಲಿಯಾರ್ ನಾವೂರು, ಹಮೀದ್ ಸಅದಿ ಕುಕ್ಕಾವು ಹಾಗೂ ಮಡಂತ್ಯಾರು, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ವೇಣೂರು ಸೆಕ್ಟರ್ ಎಸ್ಸೆಸ್ಸೆಫ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನಾ ಪ್ರದರ್ಶನದ ಬಳಿಕ ದೆಹಲಿ ಕೃತ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಬೆಳ್ತಂಗಡಿ ತರ್ಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ. ಶರೀಫ್ ಬೆರ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝುಬೈರ್ ಶಾಂತಿನಗರ ಧನ್ಯವಾದವಿತ್ತರು.