janadhvani

Kannada Online News Paper

ಅಮಿತ್ ಶಾ ಕಣ್ಣುಮುಚ್ಚಿ ಕೂತಿರುವುದೇ ದೆಹಲಿ ಗಲಭೆಗೆ ಕಾರಣ- ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯ ಸಚಿವರು, ಶಾಸಕರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾಗಲೂ ‘ಸರ್ವಶಕ್ತ’ ಗೃಹಸಚಿವ ಅಮಿತ್ ಶಾ ಅವರು ಕಣ್ಣುಮುಚ್ಚಿ ಕೂತಿರುವುದೇ ಈ ಗಲಭೆಗೆ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹತ್ತು ಜೀವಗಳನ್ನು ಬಲಿತೆಗೆದುಕೊಂಡ ದೆಹಲಿ ಗಲಭೆ ಅತ್ಯಂತ ಖೇದಕರವಾದರೂ ಅನಿರೀಕ್ಷಿತವೇನಲ್ಲ. ಗಲಭೆಗ್ರಸ್ತ ಪ್ರದೇಶಕ್ಕೆ ಅವಶ್ಯಕ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಿ ಭೀತಿಗ್ರಸ್ತ ಜನರಲ್ಲಿ ವಿಶ್ವಾಸ ತುಂಬಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎರಡು ದಿನದ ಮೊದಲು ಬಿಜೆಪಿಯ ಕಪಿಲ್‌ ಮಿಶ್ರಾ ಹಿಂಸೆಗೆ ಪ್ರಚೋದನೆ ನೀಡುವ ಭಾಷಣ ಮಾಡಿದ್ದರು. “ಶನಿವಾರ ರಾತ್ರಿಯಿಂದ ಈಶಾನ್ಯ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ, ಆದರೆ ಮೂರು ದಿನಗಳೊಳಗೆ ಪೊಲೀಸರು ಪ್ರತಿಭಟನಾಕಾರರನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತೇನೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ನಾವು ಕಾಯುತ್ತೇವೆ. ಆದರೆ ಅದರ ನಂತರ, ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ಬೀದಿಗಿಳಿಯಬೇಕಾಗುತ್ತದೆ” ಎಂದು ಪೊಲೀಸ್‌ ಅಧಿಕಾರಿಗಳ ಎದುರಿಗೆ ಅವರಾಡಿದ್ದ ಮಾತುಗಳು ವೈರಲ್‌ ಆಗಿದ್ದವು.

error: Content is protected !! Not allowed copy content from janadhvani.com