ಗುಜರಾತ್: ಇಲ್ಲಿನ ಭುಜ್ ಶಾಲೆಯಲ್ಲಿ ಯಾರಿಗೆ ಋತುಚಕ್ರ ಉಂಟಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಬೆತ್ತಲಾಗಿ ನಿಲ್ಲುವಂತೆ ಹೇಳಿದ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಗುಜರಾತ್ ರಾಜ್ಯದಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ. ಫಿಟ್ನೆಸ್ ಪರೀಕ್ಷೆಗೆ ಮಹಿಳೆಯ ಬಳಿ ಬೆತ್ತಲಾಗಿ ನಿಲ್ಲುವಂತೆ ವೈದ್ಯರು ಸೂಚಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಗುಜರಾತ್ನ ಸೂರತ್ ಮುನ್ಸಿಪಲ್ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ ನೀಡಲಾಗಿತ್ತು. ಈ ವೇಳೆ ಫಿಟ್ನೆಸ್ ಪರೀಕ್ಷೆ ವೇಳೆ 100 ಟ್ರೈನಿಗಳಿಗೆ ಬೆತ್ತಲಾಗುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಅಲ್ಲದೆ, ಪ್ರತಿ ಕೊಠಡಿಯಲ್ಲಿ 10 ಯುವತಿಯರನ್ನು ಬೆತ್ತಲಾಗಿ ನಿಲ್ಲಿಸಲಾಗಿತ್ತು. ಈ ವೇಳೆ ಕೊಠಡಿಯ ಬಾಗಿಲುಗಳು ಸರಿಯಾಗಿ ಮುಚ್ಚಿರಲಿಲ್ಲ. ಇನ್ನು, ಪರೀಕ್ಷೆ ವೇಳೆ ಯುವತಿಯರಿಗೆ ಅಸಭ್ಯ ಪ್ರಶ್ನೆಗಳನ್ನು ಕೂಡ ಕೇಳಲಾಗಿದೆ. ‘ಮದುವೆಗೂ ಮೊದಲೇ ನೀವು ಗರ್ಭ ಧರಿಸಿದ್ದೀರಾ?’ ಎಂಬಿತ್ಯಾದಿ ಪ್ರಶ್ನೆ ಕೇಳಲಾಗಿದೆ.
ಇತ್ತೀಚೆಗೆ ಭುಜ್ ನಗರದ ಸ್ವಾಮಿ ನಾರಾಯಣ್ ಮಂದಿರದ ಕೃಷ್ಣಸ್ವರೂಪ್ ದಾಸ್ ಜೀ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಋತುಮತಿಯರು ಮಾಡಿದ ಅಡುಗೆ ಊಟ ಮಾಡಿದರೆ ಮುಂದಿನ ಜನ್ಮದಲ್ಲಿ ಪುರುಷರು ಎತ್ತಾಗಿ ಹುಟ್ಟುತ್ತಾರೆ, ಮಹಿಳೆಯರು ಋತುಚಕ್ರದ ಅವಧಿಯಲ್ಲಿ ಗಂಡನಿಗೆ ಊಟ ಮಾಡಿ ಬಡಿಸಿದರೆ ಅಂಥವರು ಮುಂದಿನ ಜನ್ಮದಲ್ಲಿ ವೇಶ್ಯೆ ಅಥವಾ ಹೆಣ್ಣುನಾಯಿ ಆಗಿ ಜನ್ಮ ತಾಳುತ್ತಾರೆ,” ಎಂದು ಕೃಷ್ಣಸ್ವರೂಪ್ ದಾಸ್ ಹೇಳಿದ್ದು ವಿವಾದ ಸೃಷ್ಟಿಸಿತ್ತು.
ಇದಕ್ಕೂ ಮೊದಲು, ಸ್ವಾಮಿ ನಾರಾಯಣ್ ಮಂದಿರ ನಡೆಸುತ್ತಿರುವ ಶಾಲೆಯಲ್ಲಿ ಋತುಮತಿಯರನ್ನು ಗುರುತಿಸಲು 60 ವಿದ್ಯಾರ್ಥಿನಿಯರ ಒಳ ಉಡುಪು ಕಳಚುವಂತೆ ಸೂಚಿಸಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.