janadhvani

Kannada Online News Paper

ಪೋಲೀಸ್ ದೌರ್ಜನ್ಯ:2 ಕೋಟಿ.ರೂ ಪರಿಹಾರ ಕೇಳಿದ ಜಾಮಿಯಾ ವಿದ್ಯಾರ್ಥಿ- ಕೇಂದ್ರ, ದೆಹಲಿ ಪೋಲೀಸರಿಗೆ ನೋಟೀಸ್

ನವದೆಹಲಿ,ಫೆ.17: ಕಳೆದ ಡಿಸೆಂಬರ್ 15ನೇ ತಾರೀಕು ರಾತ್ರಿ ವೇಳೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ವೇಳೆ ತೀವ್ರ ಗಾಯಾಗೊಂಡಿದ್ದ ವಿದ್ಯಾರ್ಥಿಯೋರ್ವ 2 ಕೋಟಿ ರೂ. ಪರಿಹಾರ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ಇಂದು ಜಾಮಿಯಾ ವಿವಿ ವಿದ್ಯಾರ್ಥಿ ಶಯ್ಯಾನ್ ಮುಜೀಬ್ ಎಂಬಾತ 2 ಕೋಟಿ ರೂ. ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರ ಮತ್ತು ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ವಿವಿಯ ಗ್ರಂಥಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದರು. ಈ ವೇಳೆ ಶಯ್ಯಾನ್ ಮುಜೀಬ್ ಎರಡೂ ಕಾಲುಗಳಿಗೆ ತೀವ್ರ ಗಾಯಾಗಳಾಗಿದ್ದವು. ಈ ವಿದ್ಯಾರ್ಥಿ ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಹಣ ವ್ಯಯಿಸಿರುವುದಾಗಿ ದೆಹಲಿ ಹೈಕೋರ್ಟ್ ಸಲ್ಲಿಸಿದ ಮೇಲ್ಮನವಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೊಲೀಸರ ದೌರ್ಜನ್ಯದ ವಿಡಿಯೋ ನಾವು ಬಿಡುಗಡೆ ಮಾಡಿಲ್ಲ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಡಿ.15ನೇ ತಾರೀಕು ರಾತ್ರಿ ವೇಳೆ ಗ್ರಂಥಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದರು. ಈ ಹಲ್ಲೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದಾದ ನಂತರ ಜಾಮಿಯಾ ಸಮನ್ವಯ ಸಮಿತಿ ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಭಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಹೀಗೆ ಸ್ಪಷ್ಟೀಕರಣ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿವಿಯ ಆವರಣ ಪ್ರವೇಶಿಸಿದ ಪಾರಾ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಹಲವರು ಖಂಡಿಸಿದ್ಧಾರೆ.

error: Content is protected !! Not allowed copy content from janadhvani.com