ಯುಎಇ: ಅನಿವಾಸಿ ಕನ್ನಡಿಗರ ಕಾಲ ಉತ್ಸವ ಕೆಸಿಎಫ್ ಯುಎಇ ಆಯೋಜಿಸಿದ ನ್ಯಾಷನಲ್ ಪ್ರತಿಭೋತ್ಸವ-2020 ಎಡಿಷನ್-2 ಕಾರ್ಯಕ್ರಮಕ್ಕೆ ಶಾರ್ಜಾ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.
ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿರವರ ಅಧ್ಯಕ್ಷತೆಯಲ್ಲಿ ಸಯ್ಯದ್ ಮುಸ್ತಾಫಾ ಪೂಕೋಯ ಮಿಸ್ಬಾಹಿ ಅಲ್ ಬುಖಾರಿ ರವರ ದುಆದೊಂದಿಗೆ ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್ ಪ್ರತಿಭೋತ್ಸವವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಶಾಹುಲ್ ಸಖಾಫಿ ಮಾಧಾಪುರ ಸ್ವಾಗತ ಕೋರಿದರು.ಒಟ್ಟು ನಾಲ್ಕು ವೇದಿಕೆಗಳಲ್ಲಿ ಜೂನಿಯರ್, ಸಬ್ ಜೂನಿಯರ್, ಸೀನಿಯರ್, ಜನರಲ್ ವಿಭಾಗಗಳಲ್ಲಿ ನಡೆದ ಪ್ರತಿಭೋತ್ಸವ-2020 ಕಾರ್ಯಕ್ರಮದಲ್ಲಿ ಯುಎಇಯ ಏಳು ಎಮಿರೇಟ್ಸ್ ಗಳಿಂದ 500 ಮಿಕ್ಕ ಪ್ರತಿಭೆಗಳು 300 ರಷ್ಟು ಅನಿವಾಸಿ ಕನ್ನಡಿಗ ಕುಟುಂಬಗಳು 33 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಮಹಿಳೆಯರಿಗೆ ಪುಡ್ಡಿಂಗ್ (ಸ್ವೀಟ್ & ಸ್ಪೈಸಿ), ಬೆಸ್ಟ್ ಔಟ್ ಓಫ್ ವೇಸ್ಟ್, ರಸಪ್ರಶ್ನೆ ವಿಭಾಗಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶವನ್ನು ನೀಡಲಾಗಿತ್ತು.150 ರಷ್ಟು ಮಹಿಳೆಯರು ವಿಭಿನ್ನ ರೀತಿಯ ಪಾಕಗಳನ್ನು ಜೋಡಿಸಿ ಅವುಗಳನ್ನು ಶೃಂಗರಿಸಿ ಒಂದಕ್ಕೊಂದು ಸವಾಲೊಡ್ಡುವ ರೀತಿಯಲ್ಲಿ ಸುಂದರವಾಗಿ ಕಾಣುತ್ತಿದ್ದವು. ಅದ್ಭುತ ಕೈಚಳಕದ ಮೂಲಕ ನಿರುಪಯುಕ್ತ ವಸ್ತುಗಳಿಂದ ಮಾಡಿ ತಂದ ವಿವಿಧ ರೀತಿಯ ಕರಕುಶಲ ವಸ್ತುಗಳು ನೋಡುಗರ ಕಣ್ಣುಗಳನ್ನೇ ನಿಬ್ಬೆರಗಾಗಿಸುತ್ತಿತ್ತು.
ಶಾರ್ಜಾ, ಅಬುಧಾಬಿ, ದುಬೈ ನಾರ್ತ್ & ಸೌತ್, ಅಜ್ಮಾನ್, ರಾಸ್ ಅಲ್ ಕೈಮ, ಅಲ್ ಐನ್ ಏಳು ಝೋನ್ ಗಳ ಪ್ರತಿಭೆಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ದುಬೈ ನಾರ್ತ್ ಝೋನ್ ಮತ್ತು ಅಬುಧಾಬಿ ಝೋನಲ್ ಗಳ ತೀವ್ರವಾದ ಪೈಪೋಟಿಯನ್ನು ಸೆಟೆದು ನಿಂತ ಹಾಲಿ ಚಾಂಪಿಯನ್ ಶಾರ್ಜಾ ಝೋನ್ ಸತತ ಎರಡನೇ ಬಾರಿ ಚಾಂಪಿಯನ್ನಾಗಿ ಹೊರಹೊಮ್ಮಿತು, ಕೊನೆಯವರೆಗೂ ಉತ್ತಮ ಪ್ರದರ್ಶನ ನೀಡಿದ ಅಬುಧಾಬಿ ಝೋನ್ ರನ್ನರ್ ಅಪ್ ಮತ್ತು ಚಾಂಪಿಯನ್ ಪಟ್ಟದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ದುಬೈ ನಾರ್ತ್ ಝೋನ್ ಕೊನೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಜ್ಮಾನ್, ದುಬೈ ಸೌತ್, ಅಲ್ ಐನ್ ಮತ್ತು ರಾಸ್ ಅಲ್ ಖೈಮಾ ಕ್ರಮವಾಗಿ ಮೂರು, ನಾಲ್ಕು, ಐದು ,ಆರು ಮತ್ತು ಏಳನೇ ಸ್ಥಾನ ಲಭಿಸಿತು. ಅನಿರೀಕ್ಷಿತ ಗೆಲುವಿನ ನಗೆಯನ್ನು ಬೀರಿದ ಶಾರ್ಜಾ ಝೋನ್ ಗೆ ಮತ್ತು ಭಾಗವಹಿಸಿದ ಎಲ್ಲಾ ಝೋನ್ ಗಳಿಗೂ ಕೆಸಿಎಫ್ ನಾಯಕರು ಅಭಿನಂದನೆ ಸಲ್ಲಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಸಯ್ಯದ್ ತಾಹಾ ಬಾಫಖಿ ಉದ್ಘಾಟಿಸಿದರು, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೇಸ್ ಇಂಟರ್ನ್ಯಾಷನಲ್ ಸ್ಕೂಲ್ ಸ್ಥಾಪಕ ಪಿ.ಎ ಇಬ್ರಾಹಿಂ ಹಾಜಿ ಕೆಸಿಎಫ್ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಾಮುದಾಯಿಕ ಸೇವೆಗಳನ್ನು ಅಭಿನಂದಿಸಿ ಗಲ್ಫ್ ಇಶಾರ ಹೊರ ತಂದ ಕ್ಯಾಲೆಂಡರ್ 2020 ಯನ್ನು ಬಿಡುಗಡೆಗೊಳಿಸಿದರು. ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಸಿ.ಎಂ ಇಬ್ರಾಹಿಂ ಸಂದೇಶ ಮಾತನಾಡಿ ಗಲ್ಫ್ ಇಶಾರ 5ನೇ ವರ್ಷದ ಚಂದಾದಾರ ಅಭಿಯಾನವನ್ನು ಹಿರಿಯ ಸಮಾಜ ಸೇವಕರಾದ ಅಬ್ದುಲ್ಲಾ ಮದುಮೂಲೆ ರವರಿಗೆ ನೀಡಿ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಶುಭ ಹಾರೈಸಿ ಮಾತನಾಡಿದರು. ಕೆಸಿಎಫ್ ಇಂಟರ್ನ್ಯಾಷನಲ್ ಸಮಿತಿ ಕೋಶಾಧಿಕಾರಿ ಹಮೀದ್ ಸಅದಿ ಈಶ್ವರಮಂಗಿಲ, ದಕ್ಷಿಣ ಕನ್ನಡ ಶಿಕ್ಷಣದ ಹರಿಕಾರ ಮುಮ್ತಾಜ್ ಅಲಿ ಕೃಷ್ಣಾಪುರ, ಡಾ ಮುಹಮ್ಮದ್ ಕಾಪು, ಸಮಾಜ ಸೇವಕ ಅಬ್ದುಲ್ ಲತೀಫ್ ಮುಲ್ಕಿ, ಉದ್ಯಮಿಗಳಾದ ಎಂ ಇ ಮೂಳೂರು, SSF ಮಾಜೀ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೊಡುಗೈ ಧಾನಿಯೂ, ಹಿರಿಯ ಉದ್ಯಮಿಯೂ ಆಗಿರುವ ಎನ್ ಅಬ್ದುಲ್ ಸಮದ್, ಗಲ್ಫ್ ಇಶಾರಾ ಪಬ್ಲಿಷರ್ ಪಿಎಂ ಹಮೀದ್ ಈಶ್ವರಮಂಗಿಲ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಮಾಜಿಕ ನಾಯಕರುಗಳು, ಸಾಂಘಿಕ ನೇತಾರರು ಭಾಗವಹಿಸಿದ್ದರು. ಕೆಸಿಎಫ್ ಯುಎಇ ಸಮಿತಿ ಕಾರ್ಯದರ್ಶಿ ಮೂಸಾ ಹಾಜಿ ಬಸರ ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಇಕ್ಬಾಲ್ ಕಾಜೂರು ವಂದನಾರ್ಪಣೆ ನಿರ್ವಹಿಸಿದರು. ಹಾಫಿಳ್ ಸಯೀದ್ ಅಬುಧಾಬಿ, ರಿಯಾಝ್ ಕೊಂಡಂಗೇರಿ, ನಿಝಾಮ್ ಮದನಿ ಅಜ್ಮಾನ್, ಕಲಂದರ್ ರಝ್ವಿ ಪ್ರತಿಭೋತ್ಸವ ನಿರೂಪಣೆಯನ್ನು ನಿರ್ವಹಿಸಿ, ಸಮಾರೋಪ ಸಮಾರಂಭದ ನಿರ್ವಹಣೆಯನ್ನು ತನ್ಸೀಫ್ ಕಿಲ್ಲೂರು ರವರು ನಿರ್ವಹಿಸಿದರು.