ಬೆಂಗಳೂರು, ಜ.22: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣದ ಆರೋಪಿ ಉಡುಪಿ ಮೂಲದ ಆದಿತ್ಯ ರಾವ್ ಬುಧವಾರ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ನೀಲಮಣಿ ಎನ್. ರಾಜು ಅವರ ಕಚೇರಿಗೆ ಬಂದು ಶರಣಾಗಿದ್ದಾನೆ. ಆದಿತ್ಯ ರಾವ್ ಬಂಧನವನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದಾರೆ.
ಇಂದು ಬೆಳಗ್ಗೆ 8:45ರ ಸುಮಾರಿಗೆ ಆದಿತ್ಯ ರಾವ್ ಪೊಲೀಸರೆದುರು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.ಆರೋಪಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ತಾನು ಸ್ಫೋಟಕ ತುಂಬಿದ ಬ್ಯಾಗ್ ಇಟ್ಟು ಪರಾರಿಯಾಗಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.ಈ ನಡುವೆ ಆರೋಪಿ ಆದಿತ್ಯನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಲು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
‘ಬಾಂಬ್ ಇರಿಸುವ ಸಂದರ್ಭದ ದೃಶ್ಯಾವಳಿಗಳನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ದಿನಪತ್ರಿಕೆಗಳಲ್ಲಿ ಚಿತ್ರಗಳು ಮುದ್ರಣವಾಗಿದ್ದವು. ಇದನ್ನು ಗಮನಿಸಿದ ನಂತರ ಶರಣಾಗಲು ನಿರ್ಧರಿಸಿದೆ. ಮಂಗಳೂರಿನ ಖಾಸಗಿ ಹೊಟೆಲ್ನಲ್ಲಿ ಸ್ಫೋಟಕ ಸಿದ್ಧಪಡಿಸಿದ್ದೆ’ ಎಂದು ಪೊಲೀಸರು ನಡೆಸಿದ್ದ ಪ್ರಾಥಮಿಕ ವಿಚಾರಣೆ ವೇಳೆ ರಾವ್ ಒಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ.
‘ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಂಗಳೂರು ನಗರ ಪೊಲೀಸರ ತಂಡ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದೆ. ಶಂಕಿತನ ವಿಚಾರಣೆ ನಡೆಸುವ ಜೊತೆಗೆ ಹೆಚ್ಚಿನ ಮಾಹಿತಿ ಕಲೆಹಾಕಲಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹರ್ಷ ಟ್ವೀಟ್ ಮಾಡಿದ್ದಾರೆ.
ಹಿಂದೆಯೂ ಬಾಂಬ್ ಭೀತಿ ಹುಟ್ಟಿಸಿ ಪೊಲೀಸರ ಅತಿಥಿಯಾಗಿದ್ದ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ ಉಡುಪಿ ಮೂಲದ ಎಂಜಿನಿಯರ್ ಆದಿತ್ಯ ರಾವ್ನನ್ನು 2018ರ ಆಗಸ್ಟ್ನಲ್ಲಿ ಪೊಲೀಸರು ಬಂಧಿಸಿದ್ದರು.
15 ದಿನಗಳ ಅಂತರದಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್ಗೆ ಕರೆ ಮಾಡಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಪಾರ್ಕಿಂಗ್ ಜಾಗ ಸ್ಪೋಟಿಸುವುದಾಗಿ ಇ-ಮೇಲ್ ಮಾಡಿದ್ದ. ವಿಚಾರಣೆ ವೇಳೆ ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ ಗೂ ಬೆದರಿಕೆ ಕರೆ ಮಾಡಿದ್ದು ನಾನೇ ಅಂತಾ ತಪ್ಪೊಪ್ಪಿಕೊಂಡಿದ್ದ.
ಬಿ.ಇ., ಎಂಬಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಆದಿತ್ಯ ರಾವ್, ಕೆಲ ತಿಂಗಳ ಹಿಂದೆ ಕೆಐಎಎಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿನ ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ. ಅದೇ ಕೋಪದಿಂದ ಬೆದರಿಕೆ ಕರೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದ.
ಯಾರೀ ಆದಿತ್ಯ ರಾವ್?: ಕುಂದಾಪುರ ಮೂಲದ ಆರೋಪಿ, ಉಡುಪಿಯ ಮಣಿಪಾಲ್ನ ಕೆಎಚ್ಬಿ ಕಾಲೊನಿಯಲ್ಲಿ ಕೆಲ ವರ್ಷಗಳ ಕಾಲ ವಾಸವಿದ್ದ. ಮಣಿಪಾಲ್ದಲ್ಲೇ 2007ರಲ್ಲಿ ಎಂಬಿಎ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ತೊರೆದು, ಮತ್ತೊಂದು ಬ್ಯಾಂಕ್ನಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಬರೀ ಆರು ತಿಂಗಳು ಕೆಲಸ ಮಾಡಿ, ಮತ್ತೆ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್ನಲ್ಲೇ ಕೆಲಸಕ್ಕೆ ಸೇರಿದ್ದ. ಬ್ಯಾಂಕ್ನಲ್ಲಿ ಉತ್ತಮ ವೇತನ ದೊರಕುತ್ತಿತ್ತು. ಆದರೆ, ಆ ಕೆಲಸವನ್ನು ಬಿಟ್ಟು ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೆಲ ದಿನ ಕೆಲಸ ಮಾಡಿ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಾರ್ಡ್ ಕೆಲಸಕ್ಕೆ ಸೇರಿದ್ದ.
ಮಠದಲ್ಲೂ ಕೆಲಸ: ಚಂಚಲ ಮನಸ್ಸಿನ ವಿಚಿತ್ರ ಸ್ವಭಾವದ ಆರೋಪಿ, 2013ರಲ್ಲಿ ಉಡುಪಿಯ ಪುತ್ತಿಗೆ ಮಠಕ್ಕೆ ತೆರಳಿ ಅಡುಗೆ ಸಹಾಯಕನಾಗಿ ಕೆಲ ಕಾಲ ಕೆಲಸ ಮಾಡಿದ್ದಾನೆ. ತದ ನಂತರ ವಾಪಸ್ ಬೆಂಗಳೂರಿಗೆ ಬಂದು ಜಯನಗರದ ಜೀವ ವಿಮಾ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಕೆಲಸ ಮಾಡುವ ಕಂಪನಿಯ ಲ್ಯಾಪ್ಟಾಪ್ ಕಳ್ಳತನ ಮಾಡಿ ಕೆಲಸ ತೊರೆದಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸುದ್ದಗುಂಟೆಪಾಳ್ಯದಲ್ಲಿರುವ ಪೇಯಿಂಗ್ ಗೆಸ್ಟ್ನಲ್ಲಿ ವಾಸವಿದ್ದ ಆರೋಪಿ, ರೂಮ್ಮೇಟ್ನ ಲ್ಯಾಪ್ಟಾಪ್ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಜೂ.30ರಂದು ಸುದ್ದ್ದಗುಂಟೆಪಾಳ್ಯ ಠಾಣೆಯಲ್ಲಿ ಆದಿತ್ಯನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಏರ್ಪೋರ್ಟ್ನಲ್ಲಿ ಸೆಕ್ಯುರಿಟಿ ಕೆಲಸ ಕೇಳಿದ್ದ: ವಿಮಾ ಕಂಪನಿಯಲ್ಲಿ ಲ್ಯಾಪ್ಟಾಪ್ ಕಳವು ಮಾಡಿದ ಆದಿತ್ಯ, ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಕೇಳಿಕೊಂಡು ಹೋಗಿದ್ದ. ಈ ವೇಳೆ ಸಂಬಂಧಪಟ್ಟವರು ಕೆಲಸ ಇಲ್ಲವೆಂದು ಹೇಳಿ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ಆದಿತ್ಯ, ದ್ವೇಷದಿಂದ ಇಂಟರ್ನೆಟ್ನಲ್ಲಿ ವಿಮಾನ ನಿಲ್ದಾಣದ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ, ಆ.20ರಂದು ಹುಸಿ ಬಾಂಬ್ ಕರೆ ಕರೆ ಮಾಡಿದ್ದ. ಅದಾದ ಬಳಿಕ ಆ.27 ರಂದು ವಿಮಾನ ನಿಲ್ದಾಣದ ಏರ್ ಏಷಿಯಾ ಏರ್ಲೈನ್ಸ್ ಕೌಂಟರ್ಗೆ ಕರೆ ಮಾಡಿ, ಕೊಚ್ಚಿ ಮತ್ತು ಹೈದರಾಬಾದ್ಗೆ ಪ್ರಯಾಣಿಸುವ ವಿಮಾನ ಹಾಗೂ ಮುಂಬೈ, ಕೊಯಮತ್ತೂರು, ದೆಹಲಿಗೆ ಪ್ರಯಣಿಸುವ ವಿಮಾನಗಳಲ್ಲಿ ಬಾಂಬ್… ಇರಬಹುದು ಎಂದು ಬೆದರಿಸಿದ್ದ.
ಶುಲ್ಕ ಕೇಳಿದ್ದಕ್ಕೆ ಬಾಂಬ್ ಬೆದರಿಕೆ !
ರೈಲು ನಿಲ್ದಾಣದ ಲಗೇಜ್ ಕೊಠಡಿಯಲ್ಲಿ ತನ್ನ ಬ್ಯಾಗ್ ಇರಿಸಿದ್ದ ಆರೋಪಿ ಆದಿತ್ಯ, ಲಗೇಜ್ ಮರಳಿ ಪಡೆಯುವಾಗ ಸಿಬ್ಬಂದಿ ಶುಲ್ಕ ಕಟ್ಟುವಂತೆ ಕೇಳಿದ್ದರು. ಈ ವೇಳೆ ನನ್ನ ಬಳಿಯೇ ಹಣ ಕೇಳುತ್ತೀರಾ ಎಂದು ಸಿಬ್ಬಂದಿ ಜತೆ ಜಗಳ ಮಾಡಿದ್ದ. ಅದೇ ದಿನ (ಆ.27) ಸಂಜೆ 4 ಗಂಟೆಗೆ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ರೈಲ್ವೆ ನಿಲ್ದಾಣದ ಕ್ಲಾಕ್ ರೂಮ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಪೊಲೀಸರು ತಪಾಸಣೆ ನಡೆಸಿದಾಗ ಅದೊಂದು ಹುಸಿ ಕರೆ ಎಂದು ಗೊತ್ತಾಗಿತ್ತು. ಪೇಯಿಂಗ್ ಗೆಸ್ಟ್ನಲ್ಲಿ ಲ್ಯಾಪ್ಟಾಪ್ ಕಳವು ಮಾಡಿದ್ದ ಬಗ್ಗೆ ವಿಚಾರಣೆ ನಡೆಸಿದಾಗ, ತನ್ನ ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚಾಗಿತ್ತು. ಕಟ್ಟಲು ಸಾಧ್ಯವಾಗದೆ ಲ್ಯಾಪ್ಟಾಪ್ ಕದ್ದು, ಮಾರಾಟಕ್ಕೆ ಇಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದ.