janadhvani

Kannada Online News Paper

ನಾವುಂದ “SMA alert – 2020”: ಸಮಿತಿಗಳು ಜವಾಬ್ದಾರಿಯನ್ನರಿತು ಕಾರ್ಯಾಚರಿಸಬೇಕು- ಜೆಪ್ಪು ಮದನಿ

ಬೈಂದೂರು: ಮಸೀದಿ, ಮದ್ರಸಗಳು ಶಾಂತಿಯ ಕೇಂದ್ರಗಳು, ಈ ಕೇಂದಗಳ ಮೇಲ್ನೊಟವನ್ನು ವಹಿಸಿ ಆಡಳಿತ ನಡೆಸುವ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿ ಅರಿತವರಾಗಿರಬೇಕೆಂದು ಸುನ್ನೀ ಮ್ಯಾನೇಜ್’ಮೆಂಟ್ ಅಸೋಸಿಯೇಷನ್ (ರಿ.) ಎಸ್.ಎಂ.ಎ. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಾವುಂದ ರೀಜಿನಲ್ ಸಮಿತಿಯು ಆಯೋಜಿಸಿದ ರೀಜಿನಲ್ ಲೀಡರ್ಸ್ ಮೀಟ್ “SMA Alert – 2020” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾವುಂದ ಮುಹ್’ಯದ್ದೀನ್ ಜುಮಾ ಮಸೀದಿಯ ಮುದರ್ರಿಸರಾದ ಅಬ್ದುಲ್ಲತೀಫ್ ಅಲ್ – ಫಾಳಿಲಿಯವರು ಸುನ್ನತ್ ಜಮಾಅತಿನ ಬಗ್ಗೆ ಚುಟುಕಾಗಿ ವಿವರಿಸಿ ಶುಭಹಾರೈಸಿದರು.

ರೀಜಿನಲ್ ಅಧ್ಯಕ್ಷರಾದ ಅಬ್ದುಸ್ಸತ್ತಾರ್ ಕೋಯನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರೇಂಜ್ ಅಧ್ಯಕ್ಷರಾದ ಎಸ್. ಎಂ. ಹನೀಫ್ ಸಅದಿ ನಾವುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷರಾದ ಖತ್ತರ್ ಬಾವಾ ಹಾಜಿ ಮಾತನಾಡಿ ರೀಜಿನಲ್ ಸಮಿತಿಗಳು ಕಾರ್ಯರೂಪಕ್ಕೆ ತರಬೇಕಾದ ಕಾರ್ಯವೈಖರಿಗಳ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಂ.ಎ. ಉಡುಪಿ ಜಿಲ್ಲಾಧ್ಯಕ್ಷರಾದ ಮನ್ಸೂರು ಕೋಡಿ, ಕೋಶಾಧಿಕಾರಿ ರಮಳಾನ್ ಆಕಳಬೈಲು, ಕುಂದಾಪುರ ಝೋನಲ್ ಅಧ್ಯಕ್ಷರಾದ ಶಾಂತಿಪ್ರಿಯ ಯೂಸುಫ್ ಮಾವಿನಕಟ್ಟೆ, ರೀಜಿನಲ್ ಕೋಶಾಧಿಕಾರಿ ಅಯ್ಯೂಬ್ ಮಾಣಿಕೊಳಲು, ರಾಜ್ಯ ಸಮಿತಿ ಸದಸ್ಯರಾದ ಸೈಫುಲ್ಲಾ ಸಖಾಫಿ ಮರವಂತೆ, ಎಸ್.ಎಂ.ಎ. ರೀಜಿನಲ್ ಮಾಜಿ ಅಧ್ಯಕ್ಷರಾದ ಬಿ.ಎಸ್. ಮೊಯಿದೀನ್ ಹಾಜಿ, ಹಿರಿಯರಾದ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲು, ರೇಂಜ್ ಪ್ರಧಾನ ಕಾರ್ಯದರ್ಶಿ ಶಾಫೀ ಸಖಾಫಿ ಆಕಳಬೈಲು, ನಾವುಂದ ಮದ್ರಸ ಕಮಿಟಿ ಕಾರ್ಯದರ್ಶಿ ಎನ್. ಮೊಯಿದೀನ್, ಎಂ. ಜೆ. ಎಂ. ನಾವುಂದ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸತ್ತಾರ್ ಮೊದಲಾದ ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.

ಸದ್ರಿ ಕಾರ್ಯಕ್ರಮದಲ್ಲಿ ನಾವುಂದ ರೇಂಜಿಗೊಳಪ್ಪಟ್ಟ ಎಲ್ಲಾ ಮಸೀದಿ – ಮದ್ರಸಗಳ ಖತೀಬರು, ಸದರ್ ಉಸ್ತಾದರು, ಆಡಳಿತ ಸಮಿತಿಯ ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು. ರೇಂಜ್ ಮಿಷನರಿ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಖಾಫಿ ಗಂಗೊಳ್ಳಿ ಖುರ್’ಆನ್ ಪಠಿಸಿದರು. ಎಸ್.ಎಂ.ಎ. ನಾವುಂದ ರೀಜಿನಲ್ ಪ್ರಧಾನ ಕಾರ್ಯದರ್ಶಿ ಕೊಂಬಾಳಿ ಝುಹುರಿ ಸ್ವಾಗತಿಸಿ, ಸಂ.ಕಾರ್ಯದರ್ಶಿ ಸಮದ್ ಸಖಾಫಿ ಮಾಣಿಕೊಳಲು ವಂದಿಸಿದರು.

error: Content is protected !! Not allowed copy content from janadhvani.com