ಶಿರಡಿ: ಭಾನುವಾರದಿಂದ ಶಿರಡಿ ಸಾಯಿ ಬಾಬಾ ದೇವಾಸ್ಥಾನ ಬಂದ್ ಆಗಲಿದೆ ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ತಿಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಾಯಿ ಬಾಬಾ ಜನ್ಮ ಸ್ಥಳದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಸಂಜೆ ಟ್ರಸ್ಟ್ನ ಸದಸ್ಯರು ಮತ್ತು ಗ್ರಾಮಸ್ಥರು ಸಭೆ ಸೇರಲಿದ್ದಾರೆ.
ವಿವಾದಾತ್ಮಕ ಹೇಳಿಕೆ ವಿರುದ್ಧ ಭಾನುವಾರ (ಜನವರಿ 19)ದಿಂದ ದೇಗುಲವನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ನ ವಾಕ್ಚೌರೆ ತಿಳಿಸಿದ್ದಾರೆ.
ಈ ಸಂಬಂಧ ಚರ್ಚಿಸಲು ಇಂದು ಸಂಜೆ ಸಭೆ ಕರೆಯಲಾಗಿದೆ ಎಂದ ಅವರು, ಬೇರೆ ಸ್ಥಳಗಳಿಂದ ಬರುವ ಭಕ್ತರಿಗೆ ಸಮಸ್ಯೆಯಾಗದಂತೆ ನೋಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪರ್ಭಾನಿ ಜಿಲ್ಲೆಯ ಅಭಿವೃದ್ಧಿಯ ಕುರಿತು ಮಾತನಾಡುತ್ತಾ, ಪರ್ಭಾನಿಯ ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿದೆ. ಹಾಗಾಗಿ ಅದನ್ನು ಅಭಿವೃದ್ಧಿಪಡಿಸಿ, ಧಾರ್ಮಿಕವಾಗಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ಬಗ್ಗೆ ಹೇಳಿದ್ದರು. ಆದರೆ ಇದರಿಂದ ಅಸಮಧಾನಗೊಂಡಿರುವ ಶಿರಡಿ ದೇವಾಲಯ ಮಂಡಳಿ, ಒಂದು ವೇಳೆ ಪತ್ರಿ ಅಭಿವೃದ್ದಿ ಹೊಂದಿದರೆ ಶಿರಡಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ ಎಂದು ಪ್ರತಿಭಟಿಸುತ್ತಿದೆ.