janadhvani

Kannada Online News Paper

CAA ವಿರುದ್ಧ ಸುಪ್ರೀಮ್ ಮೆಟ್ಟಲೇರಿದ ಮೊದಲ ರಾಜ್ಯ ಕೇರಳ

ನವದೆಹಲಿ,ಜ.14; ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ.

ಕೇರಳ ವಿಧಾನಸಭೆ ಕಳೆದ ಡಿಸೆಂಬರ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ ಈ ವಿವಾದಾತ್ಮಕ ಶಾಸನವನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.

ಕೇರಳ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಷ್ಟ್ರವನ್ನು ಕೋಮುವಾದಿಗಳಂತೆ ವಿಭಜನೆ ಮಾಡುವ ಆರ್ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ” ಎಂದು ಆರೋಪಿಸಿದ್ದರು. ನಿರ್ಣಯವನ್ನು ಕೇರಳ ವಿಧಾನಸಭೆ ಅಂಗೀಕರಿಸಿದ ನಂತರ ಸಿಎಎ ಜಾರಿಗೊಳಿಸದಂತೆ ಎಲ್ಲಾ ರಾಜ್ಯದ ಸಿಎಂಗಳಿಗೂ ಪಿಣರಾಯಿ ವಿಜಯನ್ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದರು. ಅಲ್ಲದೆ, ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲೂ ಕೇರಳ ಸರ್ಕಾರದ ಪರ ಮೊಕದ್ದಮೆ ದಾಖಲಿಸಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಪಿಣರಾಯಿ ವಿಜಯನ್, “ಸಿಎಎ ಹೆಸರಿನಲ್ಲಿ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಅಸ್ಥಿತ್ವಕ್ಕೆ ಬರುವುದಿಲ್ಲ. ಕೇರಳ ರಾಜ್ಯಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ಗ್ರೀಕರು, ರೋಮನ್ನರು, ಅರಬ್ಬರು ಎಲ್ಲರೂ ನಮ್ಮ ಭೂಮಿಯನ್ನು ತಲುಪಿದರು. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಆರಂಭದಲ್ಲಿಯೇ ಕೇರಳವನ್ನು ತಲುಪಿದ್ದರು. ನಮ್ಮ ಸಂಪ್ರದಾಯ ಎಲ್ಲರನ್ನೂ ಒಳಗೊಳ್ಳುತ್ತದೆ. ನಮ್ಮ ವಿಧಾನಸಭೆ ಎಲ್ಲಾ ಸಂಪ್ರದಾಯವನ್ನು ಜೀವಂತವಾಗಿರಿಸಬೇಕಾಗಿದೆ”ಎಂದು ಅಭಿಪ್ರಾಯಪಟ್ಟಿದ್ದರು.

ಸಮಾನತೆಯ ಹಕ್ಕು ಸೇರಿದಂತೆ ಸಂವಿಧಾನದಲ್ಲಿರುವ ಅನೇಕ ಅಂಶಗಳನ್ನು ಸಿಎಎಯಲ್ಲಿ ಉಲ್ಲಂಘಿಸಲಾಗಿದೆ. ಈ ಕಾಯ್ದೆಯು ಸಂವಿಧಾನದ ಮೂಲತತ್ವವಾದ ಜಾತ್ಯತೀತತೆಗೆ ವಿರುದ್ಧವಾದದ್ದು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.ಸಂವಿಧಾನದ ವಿಧಿ 14, 21 ಮತ್ತು 25 ಅನ್ನು ಸಿಎಎಯಲ್ಲಿ ಉಲ್ಲಂಘಿಸಲಾಗಿದೆ ಎಂದೂ ಕೇರಳ ಸರ್ಕಾರ ಹೇಳಿದೆ.

2015ರ ಮೊದಲು ಪಾಕಿಸ್ತಾನ, ಆಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರ ವಾಸವನ್ನು ಕ್ರಮಬದ್ಧಗೊಳಿಸುವುದಕ್ಕೆ ಸಂಬಂಧಿಸಿದ ‘ವಿದೇಶಿಗರ ತಿದ್ದುಪಡಿ ಆದೇಶ’ ಮತ್ತು ಪಾಸ್‌ಪೋರ್ಟ್‌ ನಿಯಮದಲ್ಲಿ ಮಾಡಲಾದ ತಿದ್ದುಪಡಿಯನ್ನೂ ಕೇರಳ ಸರ್ಕಾರ ಪ್ರಶ್ನಿಸಿದೆ.

ಸಿಎಎ ಅನುಷ್ಠಾನವನ್ನು “ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆ” ಎಂದು ಬಣ್ಣಿಸಿದ ಕೇರಳ ಸಿಎಂ, “ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಸಿಎಎ 2019 ವಿವಿಧ ಸಮುದಾಯಗಳಲ್ಲಿ ಕಳವಳವನ್ನು ಉಂಟುಮಾಡಿದೆ. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ. ಕೇರಳದಲ್ಲಿ ಸಾಮಾನ್ಯವಾಗಿ ಶಾಂತಿಯುತ ಮತ್ತು ಬಿಚ್ಚಿದ ಆಂಲದೋಲನ ನಡೆದಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ 11 ರಂದು ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು “ಅಸಂವಿಧಾನಿಕ ಮಸೂದೆಗೆ” ಕೇರಳದಲ್ಲಿ ಸ್ಥಾನವಿಲ್ಲ ಮತ್ತು ರಾಜ್ಯವು ಅದನ್ನು ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

error: Content is protected !! Not allowed copy content from janadhvani.com