ಬೆಂಗಳೂರು,ನ.18: ಪಕ್ಷಾಂತರಿಗಳನ್ನ ಕೆ.ಆರ್.ಪುರಂ ಹಾಗೂ ರಾಜ್ಯದ ಮತದಾರರು ಸಹಿಸೊಲ್ಲ. ಮಹಾರಾಷ್ಟ್ರ, ಹರಿಯಾಣ, ಗುಜರಾತ್ ನಲ್ಲಿ ಪಕ್ಷ ಬಿಟ್ಟವರನ್ನು ಜನ ಸೋಲಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಕೂಡ 15 ಉಪ ಚುನಾವಣೆ ಬಂದಿದ್ರೆ ನಮ್ಮ ಪಕ್ಷದ 14 ಜನ, ಜೆಡಿಎಸ್ ನ 3 ಜನ ಆಸೆ ಆಮಿಷಕ್ಕೆ ಒಳಗಾಗಿ, ಅಧಿಕಾರ ದಾಹದಿಂದ ನಂಬಿದ ಪಕ್ಷಕ್ಕೆ ಚೂರಿ ಹಾಕಿ ಮೋಸ ಮಾಡಿರುವದರಿಂದ ಚುನಾವಣೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಸಿಎಂ ಯಡಿಯೂರಪ್ಪ ನೇರವಾಗಿ ಹಣ ಕೊಟ್ಟು ಅಧಿಕಾರದ ಆಸೆ ಹುಟ್ಟಿಸಿ ಕುದುರೆ ವ್ಯಾಪಾರ ಮಾಡಿ ಕೊಂಡುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
2013 ರಲ್ಲಿ ಎ. ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಭೈರತಿ ಬಸವರಾಜ್ ಅವರಿಗೆ ಟಿಕೆಟ್ ಕೊಡದೆ ಹೋಗಿದ್ರೆ ಜೀವನದಲ್ಲಿ ಅವರು ಶಾಸಕರಾಗುತ್ತಿರಲಿಲ್ಲ. ಭೈರತಿ ರಾಜೀನಾಮೆ ಕೊಡುವಾಗ ಮತದಾರರನ್ನ ಕೇಳಿದ್ರಾ? ಎಂದು ಪ್ರಶ್ನೆ ಮಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ, ಮತದಾರನಿಗೆ ಮೋಸ ಮಾಡಿ ಬಿಜೆಪಿ ಕೈ ಹಿಡಿದಿದ್ದಾರೆ. ನನಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ಮೋಸ ಮಾಡಿ ಬಿಜೆಪಿ ಬಾವುಟ ಹಿಡಿದಿದ್ದಾರೆ ಎಂದರು.
ಇದು ಮತದಾರರ ಸ್ವಾಭಿಮಾನದ ಪ್ರಶ್ನೆ. ನಿಮಗೆ, ಕಾಂಗ್ರೆಸ್ ಗೆ ದ್ರೋಹ ಮಾಡಿರೋದು ಈ ಅನರ್ಹ ಶಾಸಕರು. ನಮ್ಮಿಂದ ಏನೆಲ್ಲ ಕೆಲಸ ಮಾಡಿಕೊಂಡು ಅಭಿವೃದ್ಧಿ ಮಾಡಿಕೊಂಡು ಈಗ ಸಿಎಂ ಯಡಿಯೂರಪ್ಪ ಅವರ ಜೊತೆ ಕೈ ಜೋಡಿಸಿದ್ದೀರಲ್ವಾ ನಿಮಗೆ ನಾಚಿಕೆ ಆಗೊಲ್ವಾ? ಸುಪ್ರೀಂ ಕೋರ್ಟ್ ಕೂಡ ಅನರ್ಹರು ಎಂದ ಮೇಲೆ ಜನತಾ ನ್ಯಾಯಾಲಯ ಅನರ್ಹರು ಎಂದು ತೀರ್ಪು ಕೊಡಬೇಕಲ್ವಾ? ನೀವು ಅವರನ್ನ ಮನೆಗೆ ಕಳಿಸಬೇಕು. ನಿಜಕ್ಕೂ ಕಳಿಸಿದ್ರೆ ದೇಶಕ್ಕೇ ಒಂದು ಸಂದೇಶ ನೀಡಿದಂತೆ ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ಕೊಟ್ಟರು.
ಮಹಾತ್ಮ ಗಾಂಧಿ. ನೆಹರು ಹೋರಾಟ ಮಾಡಿ ಕಟ್ಟಿದಂತಹ ಪಕ್ಷ ಕಾಂಗ್ರೆಸ್. ನಾನು ಟಿಪ್ಪು ಜಯಂತಿ ಆಚರಣೆ ಜಾರಿ ಮಾಡಿದ್ದೆ ಮೂರು ವರ್ಷ ಆಚರಣೆ ಮಾಡಿಸಿದ್ವಿ ಆದರೆ ಅದನ್ನ ಬಿಜೆಪಿ ಅದನ್ನ ರದ್ದು ಮಾಡಿದ್ರು. ಈ ಹಿಂದೆ ಟಿಪ್ಪು ಸುಲ್ತಾನ್ ಒಬ್ಬ ದೇಶಭಕ್ತ ಅಂತಾ ಟೋಪಿ ಹಾಕ್ಕೊಂಡಿದರು. ಈಗ ಅದನ್ನ ನಿಲ್ಲಿಸಿದ್ರು. ಕೇಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸ, ವಾಲ್ಮೀಕಿ ಮಾಡಿದ್ದು ನಾವು. ನೀವು ಏನ್ ಮಾಡಿದ್ದೀರಿ ಅಂತಾ ಬಿಜೆಪಿಯವರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಯಡಿಯೂರಪ್ಪ ಬಿಜೆಪಿ ಯ ಕೈಗೊಂಬೆ ಪ್ರವಾಹ ಸಂದರ್ಭದಲ್ಲೂ ಎಲ್ಲೂ ಪರಿಹಾರ ಕೊಟ್ಟಿಲ್ಲ. ನಾನು ಕಳಂಕ ರಹಿತ ಸಿಎಂ ನನ್ನ ಮೇಲೆ ಯಾವುದಾದರು ಕಳಂಕ ಇದ್ಯಾ ಎಂದು ಪ್ರಶ್ನೆ ಮಾಡಿದ ಅವರು, ಬಡವರ ಶಾಪ. ಮತದಾರರ ಶಾಪ ಅನರ್ಹರಿಗೆ ತಟ್ಟುತ್ತೆ ನಮಗೆ ಬಿಜೆಪಿ ಗೆ ಪೈಪೋಟಿ. ಜೆಡಿಎಸ್ ಇದ್ಯೋ ಇಲ್ವೋ ಗೊತ್ತಿಲ್ಲ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.