ದೋಹಾ: ಸೌದಿ ಅರೇಬಿಯಾ ಮತ್ತು ಯುಎಇಯ ಬಳಿಕ ಖತರ್ ಕೂಡ ಸ್ವದೇಶೀಕರಣವನ್ನು ಜಾರಿಗೆ ತರುತ್ತಿದೆ. ಕಾರ್ಮಿಕ ಸಚಿವ ಯೂಸುಫ್ ಬಿನ್ ಮುಹಮ್ಮದ್ ಅಲ್-ಉಸ್ಮಾನ್ ಫಕ್ರು ಈ ಬಗ್ಗೆ ಮಾತನಾಡಿ, ದೇಶವು ವಿವಿಧ ವಲಯಗಳಲ್ಲಿ ದೇಶೀಕರಣವನ್ನು ಜಾರಿಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದರು.
ಉದ್ಯೋಗಗಳನ್ನು ಸ್ಥಳೀಕರಿಸುವುದು ಮತ್ತು ಕೆಲಸದ ಸ್ಥಳದಲ್ಲಿ ಸ್ವದೇಶೀ ನುರಿತ ಕಾರ್ಮಿಕರ ಪ್ರಮಾಣವನ್ನು ಹೆಚ್ಚಿಸುವುದು ರಾಷ್ಟ್ರೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡಲಿದೆ ಎಂದು ಅವರು ಹೇಳಿದರು. ಖತಾರ್ ನ್ಯಾಷನಲ್ ಬ್ಯಾಂಕ್ (ಕ್ಯೂಎನ್ಬಿ) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶೀಕರಣವನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿವಿಧ ಏಜೆನ್ಸಿಗಳು ಮತ್ತು ಏಜೆನ್ಸಿಗಳ ನಡುವಿನ ಸಹಕಾರವನ್ನು ಬಲಪಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಕ್ಯೂಎನ್ಬಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ವದೇಶೀಕರಣಗೊಂಡ ಅತಿದೊಡ್ಡ ಸಂಸ್ಥೆಯಾಗಿದೆ ಎಂದು ಆಕ್ಟಿಂಗ್ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಲಾ ಮುಬಾರಕ್ ಅಲ್ ಖಲೀಫಾ ಹೇಳಿದ್ದಾರೆ. ಕ್ಯೂಎನ್ಬಿಯಲ್ಲಿ ಸ್ಥಳೀಯರ ಸಂಖ್ಯೆಯು 50% ಕ್ಕಿಂತ ಹೆಚ್ಚು ಇದೆ. ಇದು ಉನ್ನತ ಹುದ್ದೆಯಲ್ಲಿ 77% ಆಗಿದೆ. 82 ರಷ್ಟು ಶಾಖೆಗಳ ವ್ಯವಸ್ಥಾಪಕರು ಸ್ಥಳೀಯರೇ ಆಗಿದ್ದಾರೆ ಎಂದು ಅವರು ಹೇಳಿದರು.
ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖತರ್ನಲ್ಲಿ ಈಗಾಗಲೇ ಸಾವಿರಾರು ಕಾರ್ಮಿಕರನ್ನು ಪೆಟ್ರೋಲಿಯಂ ಕಂಪನಿಗಳು ವಜಾಗೊಳಿಸಿದೆ. ನೆರೆಯ ರಾಷ್ಟ್ರಗಳ ದಿಗ್ಬಂದನದ ನಂತರ, ವ್ಯಾಪಾರ ಮತ್ತು ನಿರ್ಮಾಣ ಬಿಕ್ಕಟ್ಟು ಸಹ ವಲಸಿಗರ ಮೇಲೆ ಪರಿಣಾಮ ಬೀರಿತು. ಸೌದಿ ಅರೇಬಿಯಾದಲ್ಲಿ ಸ್ವದೇಶೀಕರಣ ಜಾರಿಗೊಂಡು ಸಾವಿರಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ.