ಬೆಳ್ತಂಗಡಿ: ಇತ್ತೀಚೆಗೆ ಕೆಲವು ಮಾಧ್ಯಮಗಳು ಗೋವಿಂದೂರು ನಿವಾಸಿ ಅಲ್’ಮದೀನಾ ಮಂಜನಾಡಿ ಸಂಸ್ಥೆಯಲ್ಲಿ ಸೇವೆಗೈಯ್ಯುತ್ತಿರುವ ರವೂಫ್ ಮುಸ್ಲಿಯಾರ್ ಎಂಬುವರನ್ನು ಭಯೋತ್ಪಾದಕನಾಗಿ ಚಿತ್ರೀಕರಿಸಿ,ಸುಳ್ಳು ಸುದ್ದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಅಂತಹ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ SSF ಬೆಳ್ತಂಗಡಿ ಡಿವಿಷನ್ ಸಮಿತಿ ವತಿಯಿಂದ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು SSF ದ.ಕ ಜಿಲ್ಲಾ ನಾಯಕ ಎಂ.ಶರೀಫ್ ಬೆರ್ಕಳ ತಿಳಿಸಿದರು.ಅವರು ಆ.23 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದರು.
ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣ, ಟಿವಿ, ಪತ್ರಿಕೆ ಅಂತರ್ಜಾಲ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಿತ್ತರಗೊಂಡ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಗೋವಿಂದೂರು ನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಎಂಬ ವಿಚಾರದಲ್ಲಿ ಗೋವಿಂದೂರು ನಿವಾಸಿಯೂ ಪ್ರಸ್ತುತ ಮಂಗಳೂರಿನ ಮಂಜನಾಡಿ ಅಲ್ ಮದೀನಾ ಸಂಸ್ಥೆಯಲ್ಲಿ ಕಳೆದ 16 ವರುಷಗಳಿಂದ ಸೇವೆಗೈಯ್ಯುತ್ತಿರುವ ರವೂಫ್ ಎಂಬ ಅಮಾಯಕ ಯುವಕನನ್ನು ರಾಷ್ಟ್ರೀಯ ತನಿಖಾ ದಳ(NIA) ತೀವ್ರ ವಿಚಾರಣೆಗೊಳಪಡಿಸಿ ಬಂಧಿಸಿದೆ ಎಂಬುವುದಾಗಿ ಕೆಲವು ಸಾಮಾಜಿಕ ಜಾಲತಾಣಗಳು, ಟಿವಿ, ಪತ್ರಿಕೆ ಮತ್ತು ಅಂತರ್ಜಾಲ ಮಾಧ್ಯಮಗಳಲ್ಲಿ ನಿರಂತರವಾಗಿ ಸುಳ್ಳು ಸುದ್ಧಿಗಳನ್ನು ಬಿತ್ತರಿಸಲಾಗಿತ್ತು.
ಇದರಿಂದಾಗಿ ರವೂಫ್’ರವರ ಕುಟುಂಬದಲ್ಲಿ, ಹಾಗೂ ಸಮಾಜದಲ್ಲಿ ತಪ್ಪು ಕಲ್ಪನೆಗಳು ರವಾನೆಯಾಗಿದ್ದು ಭಯೋತ್ಪಾದಕ ಪಟ್ಟ ಕಟ್ಟಿಕೊಂಡು ತೀವ್ರ ಮುಖಭಂಗಕ್ಕೆ ಒಳಪಟ್ಟು ಮಾನಸಿಕವಾಗಿ ನೊಂದುಕೊಂಡಿದ್ದಾರೆ.
ಈ ಬಗ್ಗೆ ಅವರು ಈಗಾಗಲೇ ದೂರುಕೂಡ ಸಲ್ಲಿಸಿರುತ್ತಾರೆ.
ಎಲ್ಲಾ ಧರ್ಮೀಯರು ಪರಸ್ಪರ ಶಾಂತಿ ಸೌಹಾರ್ದತೆಯಿಂದ ಜೀವಿಸುತ್ತಿರುವ ಈ ಜಿಲ್ಲೆಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಕೆಲವು ಸ್ಥಾಪಿತ ಹಿತಾಶಕ್ತಿಗಳು ಈ ಷಡ್ಯಂತ್ರ ರೂಪಿಸಿದ್ದು,ಮುಸ್ಲಿಂ ಸಮಾಜವನ್ನು ಗುರಿಯಾಗಿಸಿ ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ಈ ನೀಚ ಕೃತ್ಯವನ್ನು SSF ಬೆಳ್ತಂಗಡಿ ಡಿವಿಷನ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಮೂಲಕ ಈ ಸುದ್ದಿಯ ಮೂಲವನ್ನು ಹುಡುಕಿ, ಕಪೋಲಕಲ್ಪಿತ ಸುದ್ದಿ ಹಬ್ಬಿದ ಮಾಧ್ಯಮಗಳ ವಿರುದ್ಧವ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಘನವೆತ್ತ ರಾಜ್ಯಪಾಲರಲ್ಲಿ ವಿನಂತಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ SSF ದ.ಕ ಜಿಲ್ಲಾ ನಾಯಕರಾದ ಎಂ.ಶರೀಫ್ ಬೆರ್ಕಳ, ಇಕ್ಬಾಲ್ ಮಾಚಾರ್, ಬೆಳ್ತಂಗಡಿ ಡಿವಿಷನ್ ಅದ್ಯಕ್ಷ ಅಯ್ಯೂಬ್ ಮಹ್ಳರಿ ಕಾವಳ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು, ಕೋಶಾಧಿಕಾರಿ ನಝೀರ್ ಮದನಿ ಪೂಂಜಾಲಕಟ್ಟೆ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಗೂ ಮುನ್ನ SSF ಬೆಳ್ತಂಗಡಿ ಡಿವಿಷನ್ ನಿಯೋಗ ತಹಶಿಲ್ದಾರರ ಮೂಲಕ ದೂರು ಸಲ್ಲಿಸಿತು. ಈ ನಿಯೋಗದಲ್ಲಿ SSF ದ.ಕ ಜಿಲ್ಲಾ ನಾಯಕರಾದ ಎಂ.ಶರೀಫ್ ಬೆರ್ಕಳ, ಇಕ್ಬಾಲ್ ಮಾಚಾರ್, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಳ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು, ಕೋಶಾಧಿಕಾರಿ ನಝೀರ್ ಮದನಿ ಪೂಂಜಾಲಕಟ್ಟೆ SSF ಬೆಳ್ತಂಗಡಿ ಡಿವಿಷನ್ ನಾಯಕರಾದ ಸಿದ್ದೀಕ್ ಪರಪ್ಪು,ಝಮೀರ್ ಸಅದಿ ಲಾಯಿಲ,ಎಂ.ಮುಬೀನ್ ಉಜಿರೆ,SSF ಬೆಳ್ತಂಗಡಿ ಸೆಕ್ಟರ್ ನಾಯಕರಾದ ಅಶ್ರಫ್ ನಾವೂರು,ಸುಲೈಮಾನ್ ಬೆಳ್ತಂಗಡಿ,SSF ಗುರುವಾಯನಕೆರೆ ಸೆಕ್ಟರ್ ನಾಯಕರಾದ ಹಾರಿಸ್ ಪರಪ್ಪು,ರಹ್ಮಾನ್ ಗೇರುಕಟ್ಟೆ, ಫಯಾಝ್ ಗೇರುಕಟ್ಟೆ ಹಾಜರಿದ್ದರು.